ಕೊಡಗು: ಡಾ.ಕಸ್ತೂರಿ ರಂಗನ್ ವರದಿಯ ಮಾರಕ ಅಂಶಗಳನ್ನು ಕೈಬಿಡಲು ಒತ್ತಾಯ

ಮಡಿಕೇರಿ ಜ.5 : ಡಾ.ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಬೆಳೆಗಾರರನ್ನು ಒಳಗೊಂಡಂತೆ ಶ್ರೀಸಾಮಾನ್ಯರಿಗೆ ಎದುರಾಗಲಿರುವ ಸಂಕಷ್ಟಗಳಿಗೆ ಸಂಬಂಧಿಸಿದ ಮಾರಕ ಅಂಶಗಳನ್ನು ಕೈಬಿಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.
ನಗರದ ಬಾಲಭವನದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿತ ಸಭೆಯಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿಗಳಾದ ಕೊಡಗು ಜಿಲ್ಲೆಯ ಕೆ.ಕೆ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿ ರಂಗನ್ ಅವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುವ ‘ಇಕೋ ಸೆನ್ಸಿಟಿವ್ ಏರಿಯಾ’(ಇಎಸ್‍ಎ)ದಿಂದ ಗಡಿಯಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ‘ಬಫರ್ ಝೋನ್’ನ್ನು ಕೈಬಿಡುವ ಮೂಲಕ ಜನಜೀವನಕ್ಕೆ ಎದುರಾಗಬಹುದಾದ ಸಂಕಷ್ಟವನ್ನು ನಿವಾರಿಸಿಕೊಡುವುದು ಅವಶ್ಯವೆಂದು ತಿಳಿಸಿದರು.
ಪಶ್ಚಿಮ ಘಟ್ಟ ಸಾಲಿನಲ್ಲಿ ಡಾ. ಕಸ್ತೂರಿ ರಂಗನ್ ವರದಿಯಲ್ಲಿನ ಇಎಸ್‍ಎ ಮತ್ತು ಬಫರ್ ಝೋನ್‍ಗಳಲ್ಲಿ ಕೆಲ ಚಟುವಟಿಕೆಗಳನ್ನು ನಡೆಸಬಾರದೆಂದು ನಿರ್ಬಂಧ ಹೇರಲಾಗಿದೆ. ಇದರಲ್ಲಿ ಕಾಫಿ ‘ ಪಲ್ಪಿಂಗ್’ ಕೂಡ ಸೇರುತ್ತದೆ. ಯೋಜನೆಯ ಅನುಷ್ಟಾನದಿಂದ ಕಾಫಿ ಬೆಳೆಗಾರ ಸಂಕಷ್ಟಕ್ಕೆ ಸಿಲುಕಲಿರುವುದರಿಂದ, ಬೆಳೆÉಗಾರರು ಮತ್ತು ಜನರ ಜೀವನಕ್ಕೆ ಅವಶ್ಯಕವಾದ ಚಟುವಟಿಕೆಗಳಿಗೆ ಅವಕಾಶವನ್ನು ಒದಗಿಸಿಕೊಡುವ ಅಗತ್ಯವಿದೆ. ಇಂತಹ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಬೇಕೆನ್ನುವುದು ನಮ್ಮ ಆಗ್ರಹ ಪೂರ್ವಕವಾದ ಬೇಡಿಕೆಯಾಗಿದ್ದು, ಇದನ್ನು ಹೊರತು ಪಡಿಸಿದಲ್ಲಿ ವರದಿಗೆ ತಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು.
ಒಟ್ಟು ಆರು ರಾಜ್ಯಗಳನ್ನು ಹಾದು ಹೋಗಿರುವ ಪಶ್ಚಿ ಘಟ್ಟ ಸಾಲಿನ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರೊ. ಮಾಧವ ಗಾಡ್ಗಿಲ್ ಸಲ್ಲಿಸಿದ ವರದಿ ಮತ್ತು ಬಳಿಕ ಡಾ. ಕಸ್ತೂರಿ ರಂಗನ್ ರಿಂದ ಸಲ್ಲಿಕೆಯಾದ ವರದಿಗಳ ಬಗ್ಗೆ ಮಾಹಿತಿ ನೀಡಿದ ವಿಶ್ವನಾಥ್, ಕಸ್ತೂರಿ ರಂಗನ್ ವರದಿಯಲ್ಲಿ ಶೇ.20 ರಷ್ಟು ಅರಣ್ಯ ಪ್ರದೇಶವಿರುವ ಗ್ರಾಮಗಳನ್ನು ಇಎಸ್‍ಎ ಎಂದು ಪರಿಗಣಿಸಲಾಗಿದೆ. ಅದರಂತೆ ಕೊಡಗಿನಲ್ಲಿ 53 ಗ್ರಾಮಗಳು ಇಎಸ್‍ಎ ವ್ಯಾಪ್ತಿಗೆ ಬರುತ್ತದೆ. ಈ ರೀತಿಯ ವರದಿ ಬರುವ ಹಂತದಲ್ಲಿ ಕೇರಳ ಹೊರತು ಪಡಿಸಿದಂತೆ ಕರ್ನಾಟಕ, ಗೋವಾ, ಗುಜರಾತ್, ಮಹರಾಷ್ಟ್ರ, ತಮಿಳುನಾಡಿನಿಂದ ಅಗತ್ಯ ವಿರೋಧ, ತೀಕ್ಷ್ಣ ಪ್ರತಿಕ್ರಿಯೆ ಬಂದಿಲ್ಲವೆಂದು ಬೆÉೀಸರ ವ್ಯಕ್ತಪಡಿಸಿದರು.
ಇಂತಹ ಸಂದರ್ಭ ನೆರೆಯ ಕೇರಳ ಇಎಸ್‍ಎ ಯಡಿ ಬರುವ ಗ್ರಾಮಗಳನ್ನು ಅರಣ್ಯ, ಕಂದಾಯ, ಜಲ ಮೂಲ ಪ್ರದೇಶ, ಜನವಸತಿಯ ಪ್ರದೇಶ, ಕೃಷಿ ಚಟುವಟಿಕೆಯ ಪ್ರದೇಶವೆಂದು ವಿಂಗಡಿಸಿಕೊಂಡು, ಕೇಂದ್ರಕ್ಕೆ ಈ ಬಗ್ಗೆ ಸಮರ್ಪಕ ವರದಿಯನ್ನು ನೀಡಿತ್ತು. ಆ ಮೂಲಕ ಇಎಸ್‍ಎಗೆ ಒಳಪಡುತ್ತಿದ್ದ ತನ್ನ ರಾಜ್ಯದ 13 ಸಾವಿರ ಚದರ ಕಿ.ಮೀ. ಪ್ರದೇಶ ವ್ಯಾಪ್ತಿಯನ್ನು 8600 ಚ.ಕಿ.ಮೀ.ಗೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತೆಂದು ಮಾಹಿತಿ ನೀಡಿ, ಈ ಕೆಲಸ ಇಲ್ಲಿ ಸಾಧ್ಯವಾಗಿಲ್ಲವೆಂದು ತಿಳಿಸಿ, ಸ್ಥಳೀಯ ಸಮಸ್ಯೆಗಳ ಬಗೆಹರಿಕೆಗೆ ಒಕ್ಕೂಟ ಮುಖ್ಯ ಮಂತ್ರಿಗಳಾದಿಯಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಮನವಿಗಳನ್ನು ನೀಡಿರುವುದಾಗಿ ತಿಳಿಸಿದರು.
::: ಜನಪ್ರತಿನಿಧಿಗಳ ಸಭೆ :::
ಸಮಸ್ಯೆ ಬಗೆಹರಿಕೆಯ ನಿಟ್ಟಿನಲ್ಲಿ ಕರ್ನಾಟಕ ಬೆಳೆÉಗಾರರ ಒಕ್ಕೂಟ ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಸಂಸದರು, ಶಾಸಕರು, ಎಂಎಲ್‍ಸಿಗಳನ್ನು ಒಳಗೊಂಡ ಸಭೆಯೊಂದನ್ನು ನಡೆಸಲು ಉದ್ದೇಶಿಸಿದೆಯೆಂದು ವಿಶ್ವನಾಥ್ ಮಾಹಿತಿ ನೀಡಿದರು.
::: ಉಚಿತ ವಿದ್ಯುತ್ ಬೇಕು :::
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ. ಹೆಚ್.ಟಿ. ಮೋಹನ್ ಕುಮಾರ್ ಮಾತನಾಡಿ, ಕಾಫಿ ಬೆಳೆÉಗಾರರ ಅನುಕೂಲಕ್ಕಾಗಿ 10 ಹೆಚ್‍ಪಿ ವರೆಗಿನ ಮೋಟಾರ್‍ಗೆ ಉಚಿತವಾಗಿ ವಿದ್ಯುತ್ ನೀಡಬೇಕೆನ್ನುವ ಬೇಡಿಕೆಗೆ ಮುಖ್ಯ ಮಂತ್ರಿಗಳು ಸಮ್ಮತಿಯನ್ನು ನೀಡಿದ್ದರು, ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಶೀಘ್ರ ಇದನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ, ವನ್ಯ ಜೀವಿಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ಬಳಿಯಲ್ಲಿರುವ ಕೋವಿಯನ್ನು ಚುನಾವಣೆ ಮೊದಲಾದ ಹಂತಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವುದಕ್ಕೆ ವಿನಾಯಿತಿ ನೀಡುವಂತೆಯೂ ಒತ್ತಾಯಿಸಿದರು.
ಒಕ್ಕೂಟದ ಉಪಾಧ್ಯಕರಾದ ಕೊಡಗಿನ ನಂದಾ ಬೆಳ್ಳಿಯಪ್ಪ ಮಾತನಾಡಿ, ಕಳೆದ ಕೆಲ ದಶಕಗಳಿಂದ ಜಿಲ್ಲೆಯ ಹಾಗೂ ಪಶ್ಚಿಮ ಘಟ್ಟ ಪ್ರದೇಶದ ಬೆಳೆÉಗಾರರನ್ನು ಕಾಡುತ್ತಿರುವ ಕಸ್ತೂರಿ ರಂಗನ್ ವರದಿಯ ಸಂಕಷ್ಟಗಳಿಗೆ ಹಾಗೂ 10 ಹೆಚ್‍ಪಿ ವರೆಗಿನ ವಿದ್ಯುತ್‍ನ್ನು ಬೆಳೆÉಗಾರರಿಗೆ ಉಚಿತವಾಗಿ ನೀಡಬೇಕೆನ್ನುವ ವಿಚಾರಗಳು ಬಗೆಹರಿಯದಿರುವುದಕ್ಕೆ, ಸಮಸ್ಯೆಗಳನ್ನು ಅರ್ಥೈಸಿಕೊಳ್ಳದಿರುವ ಜನಪ್ರತಿನಿಧಿಗಳೆ ಮೂಲ ಕಾರಣ. ಪ್ರಸ್ತುತ 10 ಹೆಚ್‍ಪಿ ವರೆಗಿನ ಮೋಟಾರ್‍ಗೆ ವಿದ್ಯುತ್ ಬಿಲ್ ಮನ್ನಾ ಆಗುತ್ತದೆನ್ನುವ ಕಾರಣದಿಂದ ಬೆಳೆಗಾರರು ವಿದ್ಯುತ್ ಬಿಲ್ ಪಾವತಿಸಿಲ್ಲ. ಇದರಿಂದ ಕೊಡಗು ಜಿಲ್ಲೆಯಲ್ಲಿ 8 ರಿಂದ 9 ಕೋಟಿಯಷ್ಟು ವಿದ್ಯುತ್ ಬಿಲ್ ಪಾವತಿಗೆ ಬಾಕಿ ಇದೆಯೆಂದು ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು.
ಸಭೆÉಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಖಜಾಂಚಿ ಎಂ.ಬಿ. ರಾಜೀವ್, ಉಪಾಧ್ಯಕ್ಷರಾದ ಹಾಸನದ ಬಿ.ಎಂ. ನಾಗರಾಜ್, ಉಪಾಧ್ಯಕ್ಷರಾದ ಚಿಕ್ಕಮಗಳೂರು ಜಿಲ್ಲೆಯ ಎ.ಕೆ. ವಸಂತೇಗೌಡ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.

Latest Indian news

Popular Stories