ಮಡಿಕೇರಿ ಡಿ.11 : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)ಯ ಉದ್ಯೋಗಿಗಳನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆನ್ನುವ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ಸಾರಿಗೆ ನೌಕರರು ಮುಷ್ಕರಕ್ಕೆ ನಡೆಸಿದ ಪರಿಣಾಮ ಕೊಡಗಿನಾದ್ಯಂತ ಸರ್ಕಾರಿ ಬಸ್ಗಳ ಸಂಚಾರ ಸಂಪÀÇರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಕೆಎಸ್ಆರ್ಟಿಸಿಯ ಮಡಿಕೇರಿ ಡಿಪೆÀÇೀದಿಂದ ಪ್ರತಿನಿತ್ಯ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ತೆರಳುವ ಸುಮಾರು 130 ಸರ್ಕಾರಿ ಬಸ್ಗಳು ಸ್ಥಗಿತಗೊಂಡಿದ್ದವು. ಇತರೆಡೆಗಳಲ್ಲೂ ಮುಷ್ಕರ ನಡೆಯುತ್ತಿರುವ ಹಿನ್ನೆಲೆ ಹೊರ ಜಿಲ್ಲೆಗಳಿಂದ ಆಗಮಿಸುವ ಸುಮಾರು 330 ಬಸ್ಗಳು ಬಾರದೆ ಇದ್ದುದರಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ತೆರಳಬೇಕಾದ ಸಾಕಷ್ಟು ಪ್ರಯಾಣಿಕರು, ಮುಷ್ಕರದ ಅರಿವಿಲ್ಲದೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಆಗಮಿಸಿ ನಿರಾಶರಾದರು.
ಮಡಿಕೇರಿ ಡಿಪೋಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ 520 ನೌಕರರು ಕಾರ್ಯ ಸ್ಥಗಿತಗೊಳಿಸಿ, ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡು, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿ ಗಮನ ಸೆಳೆದರು. ನೌಕರರ ಮುಷ್ಕರ ಒಂದೆಡೆ ನಡೆಯುತ್ತಿದ್ದರೆ ನೂರಾರು ಸಂಖ್ಯೆಯಲ್ಲಿದ್ದ ಜಿಲ್ಲೆ, ಹೊರ ಜಿಲ್ಲೆಯ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳಿಲ್ಲದೆ ಪರದಾಡುತ್ತಿದ್ದ ದೃಶ್ಯ ಕಂಡು ಬಂತು.
::: ಬಸ್ ನಿಲ್ದಾಣದಲ್ಲೆ ಅಡುಗೆ :::
ಮುಷ್ಕರದ ಹಿನ್ನೆಲೆ ಮಡಿಕೇರಿ ಬಸ್ ನಿಲ್ದಾಣದಲ್ಲಿ ಸಾಲು ಸಾಲಾಗಿ ನಿಲ್ಲಿಸಿದ್ದ ಬಸ್ಗಳ ಬದಿಯಲ್ಲೆ ಕೆಎಸ್ಆರ್ಟಿಸಿ ನೌಕರರು ಮಧ್ಯಾಹ್ನದ ಅಡುಗೆ ಮಾಡಿ ಊಟ ಮಾಡಿದರು. ಅನೇಕರು ಉರುಳು ಸೇವೆ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದರು. ಸರ್ಕಾರ ಕೆಎಸ್ಆರ್ಟಿಸಿ ಸಿಬ್ಬಂದಿಗಳನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಅಗತ್ಯ ಸೌಲಭ್ಯ ನೀಡಲು ಒಪ್ಪಿಗೆ ಸೂಚಿಸುವವರೆಗೂ ಮುಷ್ಕರ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಸರ್ಕಾರಿ ಬಸ್ಗಳಲ್ಲಿ ಕಾರ್ಯನಿರ್ವಹಿಸುವ ನಮ್ಮನ್ನೇಕೆ ಸರ್ಕಾರಿ ನೌಕರರನ್ನಾಗಿ ಪರಿಗಣಿಸುತ್ತಿಲ್ಲ ? ಎಂದು ಮುಷ್ಕರ ನಿರತರು ತೀವ್ರ ಪ್ರಶ್ನಿಸಿದರು. ಕಳೆದೊಂದು ದಶಕದಿಂದ ಕೆಎಸ್ಆರ್ಟಿಸಿ ನೌಕರರು ಹತ್ತು ಹಲವು ಬಾರಿ ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಕದ ತಟ್ಟಿದ್ದರು ಸೂಕ್ತ ಸ್ಪಂದನ ದೊರಕಿಲ್ಲವೆಂದು ಬಸ್ ನಿರ್ವಾಹಕ ಚಂದ್ರು ಬೇಸರ ವ್ಯಕ್ತಪಡಿಸಿದರು.
::: ಕೋವಿಡ್ನಿಂದ ಮೃತರಾದವರಿಗೆ ಪರಿಹಾರ ಸಿಕ್ಕಿಲ್ಲ :::
ಕೊರೊನಾ ಸಾಂಕ್ರಾಮಿಕಕ್ಕೆ ಸಿಲುಕಿ ಸಾವನ್ನಪ್ಪಿದ ಕೆಎಸ್ಆರ್ಟಿಸಿ ನೌಕರರಿಗೆ ಅಗತ್ಯ ಪರಿಹಾರ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ರಾಜ್ಯದಲ್ಲಿ ಸುಮಾರು 37 ಮಂದಿ ನೌಕರರು ಕೊರೊನಾದಿಂದ ಸಾವನ್ನಪ್ಪಿದ್ದು, ಇವರ ಕುಟುಂಬಕ್ಕೆ ಇಲ್ಲಿಯವರೆಗೂ ಅಗತ್ಯ ನೆರವು ಸರ್ಕಾರದಿಂದ ತಲುಪಿಲ್ಲವೆಂದು ಮುಷ್ಕರ ನಿರತರು ಅಸಮಾಧಾನ ವ್ಯಕ್ತಪಡಿಸಿದರು.
ನಿಗಮದಡಿ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.