ನವದೆಹಲಿ, ನ 16 (ಯುಎನ್ಐ)- ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಭಾರತ, ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಸಹಭಾಗಿತ್ವದ ಹೃದಯಭಾಗವಾಗಿದೆ ಎಂದು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಸೋಮವಾರ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ‘ಡೆಕ್ಕನ್ ಡೈಲಾಗ್ ವರ್ಚುಯಲ್ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ಲಸಿಕೆಗಳನ್ನು ಸುಲಭ ದರದಲ್ಲಿ ಎಲ್ಲರಿಗೂ ಕೈಗೆಟುಕುವಂತಾಗಲು ಭಾರತ ಸಹಾಯ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಗೆ ಬದ್ಧತೆ ತೋರಿಸಿದ್ದಾರೆ. ಭಾರತ ಈ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಲು ಜಗತ್ತು ನಿರೀಕ್ಷಿಸುತ್ತಿದೆ.’ ಎಂದು ಹೇಳಿದ್ದಾರೆ.
ಮಾರಣಾಂತಿಕ ಕೊರೋನಾವೈರಸ್ ಹರಡುವಿಕೆ ತಡೆಗೆ ಸಹಾಯ ಮಾಡುವಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ಗಮನ ಸೆಳೆದ ಸಚಿವರು, ಬೇಡಿಕೆಯ ಔಷಧಗಳಾದ ವಿಶೇಷವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ಉತ್ಪಾದನೆಯನ್ನು ಭಾರತ ಹೆಚ್ಚಿಸಿ, 150 ದೇಶಗಳಿಗೆ ಅರ್ಧಕ್ಕಿಂತ ಕಡಿಮೆ ದರದಲ್ಲಿ ಪೂರೈಸಿದೆ. ಇದೀಗ ತ್ವರಿತ ಪರೀಕ್ಷೆ ಮತ್ತು ವಿಶ್ವಾಸಾರ್ಹ ಲಸಿಕೆಗಳೆಡೆಗೆ ಗಮನ ಬದಲಾಗಿದೆ. ಸಾಮಾನ್ಯ ಸ್ಥಿತಿಗೆ ಮರಳಲು ಈ ಎರಡೂ ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಭಾರತ, ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಸಹಭಾಗಿತ್ವದ ಹೃದಯಭಾಗದಲ್ಲಿದೆ ಎಂದು ಜೈಶಂಕರ್ ಹೇಳಿದ್ದಾರೆ.