ಕೋರೊನಾ: ಚಳಿಗಾಲದಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ – ಮುನ್ನೆಚ್ಚರಿಕೆ ಅಗತ್ಯ

ನವದೆಹಲಿ: ಕೊರೋನಾ ವೈರಾಣುವಿನ ಹೊಸ ರೂಪಾಂತರಿಗಳು, ದೇಶದ ಹಲವು ಭಾಗಗಳಲ್ಲಿ ಚಳಿಗಾಲದ ಸಮಸ್ಯೆ ಮೂರನೇ ಅಲೆಯ ಕೊರೋನಾ ಸೋಂಕು ಪ್ರಸರಣದ ಭೀತಿಯನ್ನು ಹೆಚ್ಚಿಸಿದೆ.

ತಜ್ಞರು ಮೂರನೇ ಅಲೆಯ ಬಗ್ಗೆ ಮಾತನಾಡಿದ್ದು, ಎರಡನೇ ಅಲೆಯಷ್ಟು ಅಪಾಯಕಾರಿಯಾಗಿರುವುದಿಲ್ಲ ಎಂಬ ಸಮಾಧಾನದ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಹಾಗೆಂದು ಮುನ್ನೆಚ್ಚರಿಕಾ ಕ್ರಮಗಳನ್ನಾಗಲೀ, ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳನ್ನಾಗಲೀ ಮರೆಯುವಂತಿಲ್ಲ ಎಂದೂ ತಜ್ಞರು ಎಚ್ಚರಿಸಿದ್ದಾರೆ. ಡಿಸೆಂಬರ್-ಫೆಬ್ರವರಿ ತಿಂಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗಬಹುದು ಆದರೆ ಅದು 2 ನೇ ಅಲೆಯಲ್ಲಿದ್ದಷ್ಟು ತೀವ್ರವಾಗಿರುವ ಸಾಧ್ಯತೆ ಕಡಿಮೆ ಇದೆ.

ಈಗಿರುವುದಕ್ಕಿಂತಲೂ ಹೆಚ್ಚು ವೇಗವಾಗಿ ಹರಡುವ ಕೊರೋನಾ ರೂಪಾಂತರಿಗಳು ಪತ್ತೆಯಾಗದೇ ಇದ್ದಲ್ಲಿ, ದೇಶಾದ್ಯಂತ ಕ್ರಮೇಣ ಕೊರೋನಾ ಸೋಂಕು ಹರಡುವಿಕೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಸೋನಿಪಾಟ್ ನ ಅಶೋಕ ವಿಶ್ವವಿದ್ಯಾಲಯದಲ್ಲಿನ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರದ ವಿಭಾಗದ ಪ್ರೊಫೆಸರ್ ಗೌತಮ್ ಮೆನನ್ ಹೇಳಿದ್ದಾರೆ.

ದೀಪಾವಳಿ, ದಸರಾ, ಹೀಗೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹೆಚ್ಚು ಜನ ಪರಸ್ಪರ ಭೇಟಿಯಾಗುವುದರಿಂದ ಈ ಅವಧಿಯ ಬಳಿಕ ಕೊರೋನಾ ಸೋಂಕು ಪ್ರಸರಣ ತೀವ್ರವಾಗಿ ಉಲ್ಬಣವಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದರು. ಅದೃಷ್ಟವಶಾತ್ ಹಾಗೆ ಆಗಿಲ್ಲ.

ಇನ್ನು ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ನ.23 ರಂದು ವರದಿಯಾಗಿದ್ದ ಪ್ರಕರಣಗಳ ಸಂಖ್ಯೆ 543 ದಿನಗಳಲ್ಲೇ ಅತಿ ಕನಿಷ್ಟವಾದ ಸಂಖ್ಯೆಯಾಗಿತ್ತು ಎಂಬುದು ಗಮನಾರ್ಹ. ನ.23 ರ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಈಗ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 3,45,26,480 ಇದ್ದು, 536 ದಿನಗಳಲ್ಲೇ ಕನಿಷ್ಟ ಸಂಖ್ಯೆಯನ್ನು ತಲುಪಿದೆ.

ಎರಡನೇ ಅಲೆಯಲ್ಲಿ ಬಹುತೇಕ ಭಾರತೀಯರಿಗೆ ಸೋಂಕು ಹರಡಿದೆ. ಇದರ ಜೊತೆಗೆ ಲಸಿಕೆ ಅಭಿಯಾನದ ವೇಗವನ್ನೂ ಹೆಚ್ಚಿಸಲಾಗಿದೆ. ಹೆಚ್ಚು ಮಂದಿ ಲಸಿಕೆ ಪಡೆದುಕೊಂಡಿದ್ದು ಕೊರೋನಾ ಸೋಂಕು ತಗುಲಿದರೂ ಬಹುತೇಕ ಪ್ರಕರಣಗಳಲ್ಲಿ ಆಸ್ಪತ್ರೆಯ ಐಸಿಯುಗೆ ದಾಖಲಾಗುವ ತುರ್ತು ಪರಿಸ್ಥಿತಿ, ಸಾವಿನ ಭೀತಿಯಿಂದ ರಕ್ಷಣೆ ನೀಡುತ್ತದೆ ಎಂದು ಮೆನನ್ ಹೇಳಿದ್ದಾರೆ.

ಲಸಿಕೆ ಪಡೆದವರಲ್ಲಿನ ರೋಗನಿರೋಧಕ ಶಕ್ತಿಗೆ ಹೋಲಿಕೆ ಮಾಡಿದರೆ ಲಸಿಕೆ ಇಲ್ಲದೆಯೇ ಕೊರೋನಾದ ವಿರುದ್ಧ ಹೋರಾಡಿದವರಲ್ಲಿ ರೋಗನಿರೋಧಕ ಶಕ್ತಿ ಮತ್ತಷ್ಟು ಹೆಚ್ಚಾಗಿರುತ್ತದೆ. ಅವರಲ್ಲಿ ಹೈಬ್ರಿಡ್ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಮನನ್ ಹಲವು ಅಧ್ಯಯನ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

Latest Indian news

Popular Stories