ಜಾರಕಿಹೊಳಿ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡ ” ಶ್ರೀಧರ್‌ ಭಟ್‌ ಎಸ್‌ಡಿಎಂಸಿ ಉಜಿರೆ” ಎಂಬ ಐಡಿ – ನೋಟಿಸ್ ಜಾರಿ!

ಬೆಂಗಳೂರು: ‘ಶ್ರೀಧರ್‌ ಭಟ್‌ ಎಸ್‌ಡಿಎಂಸಿ ಉಜಿರೆ’ ಎಂಬ ಐಡಿಯಲ್ಲಿ ವರ್ಚುವಲ್‌ ಮೂಲಕ ವಿಚಾರಣೆಗೆ ಲಾಗಿನ್‌ ಆಗಿದ್ದ ವ್ಯಕ್ತಿಯು ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಹಿರಂಗ ಪ್ರಕರಣದ ವರ್ಚುವಲ್‌ ವಿಚಾರಣೆ ವೇಳೆ ಅರೆನಗ್ನವಾಗಿ ಓಡಾಡುತ್ತಿದ್ದುದು ಕಾಣಿಸುತ್ತಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ, ಸಂತ್ರಸ್ತ ಯುವತಿ ಪರ ವಾದ ಮಂಡಿಸುತ್ತಿದ್ದ ಇಂದಿರಾ ಜೈಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಆ ವ್ಯಕ್ತಿ ಕುರಿತು ಮಾಹಿತಿ ಸಂಗ್ರಹ ಮಾಡುವಂತೆ ನ್ಯಾಯಾಲಯದ ಅಧಿಕಾರಿಗಳಿಗೆ ನ್ಯಾಯಪೀಠ ಸೂಚಿಸಿದೆ. ಮಂಗಳವಾರ ಮಧ್ಯಾಹ್ನ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಸಂತ್ರಸ್ತ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್‌ ವಾದ ಮಂಡಿಸುತ್ತಿದ್ದರು. ಆ ಸಮಯದಲ್ಲಿ ‘ಶ್ರೀಧರ್‌ ಭಟ್‌ ಎಸ್‌ಡಿಎಂಸಿ ಉಜಿರೆ’ ಎಂಬ ಹೆಸರಿನಲ್ಲಿ ವರ್ಚುವಲ್‌ ಮೂಲಕ ವಿಚಾರಣೆಗೆ ಲಾಗಿನ್‌ ಆಗಿದ್ದ ವ್ಯಕ್ತಿಯು ಅರೆನಗ್ನವಾಗಿ ಓಡಾಡುತ್ತಿದ್ದುದು ಕಾಣಿಸುತ್ತಿತ್ತು. ಅದನ್ನು ಗಮನಿಸಿದ ಇಂದಿರಾ ಜೈಸಿಂಗ್‌ ಆಕ್ಷೇಪಿಸಿದರು.

ಪ್ರಕರಣದ ವಿಚಾರಣೆ ಕೊನೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಂತ್ರಸ್ತ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್‌ ಅವರು, ತಾನು ವಾದ ಮಂಡಿಸುತ್ತಿದ್ದ ವೇಳೆ ವರ್ಚುವಲ್ ವಿಚಾರಣೆಗೆ ಲಾಗಿನ್ ಆಗಿದ್ದ ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ ಎಂಬ ಲಾಗಿನ್ ಐಡಿ ಹೊಂದಿದ್ದ ವ್ಯಕ್ತಿಯು ಅರೆನಗ್ನ ಸ್ಥಿತಿಯಲ್ಲಿ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ವರ್ಚುವಲ್‌ ವಿಚಾರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಮಹಿಳಾ ವಕೀಲೆಯಾದ ನನಗೆ ಸಾಕಷ್ಟು ಮುಜುಗರ ಉಂಟಾಯಿತು. ಸರಿಯಾಗಿ ವಾದ ಮಂಡಿಸಲು ಸಮಸ್ಯೆಯಾಯಿತು. ಈ ವೇಳೆ ಕೋರ್ಟ್ ಪ್ರಕರಣದ ವಿಚಾರಣೆಯಲ್ಲಿ ತೊಡಗಿದ್ದರಿಂದ ಅದರ ಬಗ್ಗೆ ಚರ್ಚಿಸಲಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಹಲವು ತಿಂಗಳಿಂದ ನಾನು ವರ್ಚುವಲ್‌ ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಈ ರೀತಿ ಎಂದಿಗೂ ಆಗಿರಲಿಲ್ಲ. ಹೈಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಹೀಗಾಗುತ್ತದೆ ಎಂದರೆ ಹೇಗೆ? ಹೈಕೋರ್ಟ್‌ ಘನತೆ ಏನಾಗಬೇಕು? ಆ ವ್ಯಕ್ತಿ ಅರೆ ನಗ್ನವಾಗಿ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದಾಖಲೆ ಇದೆ. ಅದನ್ನು ಕಳುಹಿಸಿಕೊಡುತ್ತೇನೆ. ಇದು ನ್ಯಾಯಾಂಗ ನಿಂದನೆಯಾಗಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಪೀಠವು ಪ್ರಕರಣದಲ್ಲಿ ತಲ್ಲೀನವಾಗಿದ್ದರಿಂದ ಅದರತ್ತ ಗಮನಹರಿಸಲಿಲ್ಲ. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಶ್ರೀಧರ್‌ ಭಟ್‌ ಎಸ್‌ಡಿಎಂಸಿ ಉಜಿರೆ ಎಂದು ಲಾಗಿನ್‌ ಆಗಿದ್ದ ವ್ಯಕ್ತಿ ವರ್ಚುವಲ್‌ ವಿಚಾರಣೆಯಿಂದ ನಿರ್ಗಮಿಸಿದ್ದಾನೆ.

ಕೋರಿಕೆ ಪರಿಗಣಿಸಿದ ಪೀಠ, ಅರೆ ನಗ್ನವಾಗಿ ಕಾಣಿಸಿಕೊಂಡಿದ್ದನ್ನು ನಾವು ನೋಡಿಲ್ಲ. ಆದರೂ ಆ ವ್ಯಕ್ತಿಯ ಮಾಹಿತಿಯನ್ನು ದತ್ತಾಂಶದಲ್ಲಿ ಪರಿಶೀಲಿಸಿ ಅವರಿಗೆ ನೋಟಿಸ್‌ ಜಾರಿಗೊಳಿಸಿ ಎಂದು ನ್ಯಾಯಾಲಯದ ಅಧಿಕಾರಿಗಳಿಗೆ ನಿರ್ದೇಶಿಸಿತು.

Latest Indian news

Popular Stories