ಹೈದರಾಬಾದ್: ಆರೋಪಿಯ ಹತ್ಯೆಯ ನಂತರ ವಿಷಾದದ ಸ್ಥಿತಿಯಲ್ಲಿದ್ದೆ. ಆದ್ದರಿಂದ ವಿವರಗಳನ್ನು ಸರಿಯಾಗಿ ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಅಂದಿನ ಶಾದ್ನಗರ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ), ಸುರೇಂದರ್ ಅವರು ಸೋಮವಾರ ಸುಪ್ರೀಂ ಕೋರ್ಟ್ ನೇಮಕಗೊಂಡ ಸಿರ್ಪುರ್ಕರ್ ಆಯೋಗದ ಮುಂದೆ ಹಾಜರಾಗಿ ಹೇಳಿದರು. ದಿಶಾ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್ಕೌಂಟರ್ ಕುರಿತು ಸಿರ್ಪುರ್ಕರ್ ಆಯೋಗವು ತನಿಖೆ ನಡೆಸುತ್ತಿದೆ.
ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದಾಗ ಅವರು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಕಣ್ಣಿಗೆ ಮಣ್ಣು ಎರಚಿ ಗುಂಡು ಹಾರಿಸಿದರು. ಇದರ ಪರಿಣಾಮವಾಗಿ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಸುರೇಂದರ್ ಹೇಳಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆದರೆ ನಂತರ ಸಲ್ಲಿಸಿದ ಅಫಿಡವಿಟ್ ನಲ್ಲಿ ಆರೋಪಿಗಳು ಮಣ್ಣು ಎರಚಿದ್ದಾರೆ. ಗುಂಡು ಹಾರಿಸಿದ್ದಾರೆ ಎಂದು ಏಕೆ ಹೇಳಿಲ್ಲ ಎಂದು ಆಯೋಗ ಪ್ರಶ್ನಿಸಿದೆ. ಎನ್ಕೌಂಟರ್ ಬಳಿಕ ಅವರ ಮೂಡ್ ಚೆನ್ನಾಗಿರಲಿಲ್ಲ. ಅವರ ಹೆಸರು ಹೇಳಲು ಸಾಧ್ಯವಿಲ್ಲ ಎಂದು ಎಸಿಪಿ ಹೇಳಿದ್ದಾರೆ.
ಮೊದಲು ಕೆಸರನ್ನು ಎರಚಿದವರು ಯಾರು? ಯಾರ ಕಣ್ಣಿಗೂ ಮಣ್ಣು ಬಿದ್ದಿದೆಯೇ?” ಎಂದು ಆಯೋಗ ಪ್ರಶ್ನಿಸಿದೆನ ಕತ್ತಲಾಗಿರುವುದರಿಂದ ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಶಬ್ದ ಬಂದ ದಿಕ್ಕಿಗೆ ಗುಂಡು ಹಾರಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಮಾಜಿ ಎಸಿಪಿ ಉತ್ತರಿಸಿದರು.
ಕೆಲವು ದಿನಗಳ ಹಿಂದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಗಾಗಿ ಕೆಲಸ ಮಾಡುವ ಅಧಿಕಾರಿಗಳು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಈ ಸಂದರ್ಭದಲ್ಲಿ ಎಸಿಪಿ ಆರೋಪಿಸಿದ್ದಾರೆ.