ರೈತ ಪ್ರತಿಭಟನೆಯ ಸ್ಥಳದಲ್ಲಿ ಆಕಸ್ಮಿಕ ಬೆಂಕಿ

ನವದೆಹಲಿ: ಕೇಂದ್ರ ಸರಕಾರದ ತರಲಿಚ್ಚಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ನಡುವೆ, ಸಿಂಘು ಗಡಿಯಲ್ಲಿ ಸ್ಥಾಪಿಸಲಾದ ಟೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಬೆಂಕಿ ಅವಘಡದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಅಧಿಕೃತ ಮಾಹಿತಿ ಪ್ರಕಾರ ಸಿಂಘು ಗಡಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ. ಕೂಡಲೇ ಟೆಂಟ್‌ನಲ್ಲಿದ್ದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡ ಪ್ರತಿಭಟನಾನಿರತ ರೈತರು, “ಸಿಂಗು ಗಡಿಯಲ್ಲಿ ಟೆಂಟ್‌ನೊಳಗೆ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ವರದಿಗಳು ನಿಜ.ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಎಲ್ಲ ರೈತರು ಸುರಕ್ಷಿತವಾಗಿದ್ದಾರೆ. ಅವರಿಂದ ತಕ್ಷಣ ಪರಿಸ್ಥಿತಿ ಹತೋಟಿಗೆ ತರಲಾಯಿತು ಎಂದು ಹೇಳಿದ್ದಾರೆ.

ಇಂತಹ ಘಟನೆ ರೈತ ಸಂಘಟನೆಗಳಿಗೆ ಹೊಸದಲ್ಲ. ಕಳೆದ 11 ತಿಂಗಳಿನಿಂದ ದೆಹಲಿಯಲ್ಲಿ ರೈತರು ರಸ್ತೆಗಳ ಮೇಲೆ ಕುಳಿತು ತೀವ್ರ ಶಾಖ ಮತ್ತು ಶೀತ ಅಲೆಗಳಿಂದ ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ದೀಪಾವಳಿಯ ದಿನದಂದು ಇಂತಹ ಘಟನೆಗಳು ಸಹ ರೈತರ ಉತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ದೆಹಲಿಯ ವಿವಿಧ ಗಡಿಗಳಲ್ಲಿ ಇಂತಹ ಬೆಂಕಿಯ ಘಟನೆಗಳು ವರದಿಯಾಗಿದ್ದರೂ ಇದುವರೆಗೆ ಯಾವುದೇ ದೊಡ್ಡ ಘಟನೆ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Latest Indian news

Popular Stories