ಸೇನಾ ಹೆಲಿಕಾಪ್ಟರ್ ದುರಂತ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ತನಿಖಾ ತಂಡದಿಂದ ವಿಸ್ತೃತ ವರದಿ ಸಲ್ಲಿಕೆ

ನವದೆಹಲಿ: ಡಿಸೆಂಬರ್ 8ರಂದು ತಮಿಳು ನಾಡಿನ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಸೇರಿದಂತೆ 14 ಮಂದಿ ಮೃತಪಟ್ಟಿರುವ ಘಟನೆಯ ತ್ರಿಸೇವಾ ತನಿಖೆಯನ್ನು ಪೂರ್ಣಗೊಳಿಸಿರುವ ತಂಡ ಇಂದು ಬುಧವಾರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದೆ.

ರಷ್ಯಾ ಮೂಲದ ಮಿ-17ವಿ5 ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಈ ದುರಂತ ಹೇಗಾಯಿತು ಎಂದು ತ್ರಿಸೇವಾ ತನಿಖೆ ನಡೆಸಿದ್ದು ಇಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ, ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ತನಿಖಾ ಸಮಿತಿ ಮುಖ್ಯಸ್ಥ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರು ಇಂದು ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ತೆರಳಿ ವರದಿ ನೀಡಿ ಸುಮಾರು 45 ನಿಮಿಷಗಳ ಕಾಲ ತನಿಖೆಯ ವಿವರ ನೀಡಿದ್ದಾರೆ.

ಸಂಭಾವ್ಯ ಮಾನವ ದೋಷ ಅಥವಾ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ತಯಾರಿ ನಡೆಸುತ್ತಿದ್ದಾಗ ಸಿಬ್ಬಂದಿ ಭಯಗೊಂಡಿದ್ದರೇ ಎಂಬಿತ್ಯಾದಿ ಸೇರಿದಂತೆ ಅಪಘಾತದ ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ತನಿಖಾ ತಂಡವು ಪರಿಶೀಲಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಐಎಎಫ್‌ನ ಬೆಂಗಳೂರು ಪ್ರಧಾನ ಕಛೇರಿಯ ತರಬೇತಿ ಕಮಾಂಡ್‌ನ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ಸಿಂಗ್ ಅವರು ವಿಮಾನ ಅಪಘಾತ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.

Latest Indian news

Popular Stories