ಬೆಂಗಳೂರು: ಕಳೆದ ತಿಂಗಳು ಅಕ್ಟೋಬರ್ 29ರಂದು ಹಠಾತ್ ನಿಧನರಾದ ಸ್ಯಾಂಡಲ್ ವುಡ್ ಪವರ್ ಸ್ಟಾರ್, ಎಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿತ್ತು.
ನಾರಾಯಣ ನೇತ್ರಾಲಯದ ವೈದ್ಯರ ತಂಡ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪುನೀತ್ ಅವರ ಎರಡು ಕಣ್ಣುಗಳನ್ನು ಭಾಗಗಳನ್ನಾಗಿ ಮಾಡಿ ನಾಲ್ವರಿಗೆ ದೃಷ್ಟಿಯನ್ನು ನೀಡಿತ್ತು. ಇದೀಗ ನಾರಾಯಣ ನೇತ್ರಾಲಯವು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಪುನೀತ್ ರಾಜ್ ಕುಮಾರ್ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ಮುಂದಾಗಿದೆ.
ಪುನೀತ್(Puneet Rajkumar) ಅವರ ಕಣ್ಣುಗಳು ಆರೋಗ್ಯವಾಗಿರುವುದರಿಂದ ಸ್ಟೆಮ್ ಸೆಲ್ಸ್ ಗಳನ್ನು ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯವು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದು, ಯಶಸ್ವಿಯಾದರೆ 10 ದಿನದಲ್ಲಿ 10 ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ಬರಲಿದೆ. ಸ್ಟೆಮ್ ಸೆಲ್ ಗಳಿಂದ ಸ್ಟೇಮ್ ಸೆಲ್ ಥೆರಫಿ ನಡೆಸಿದರೆ ಮತ್ತೆ ದೃಷ್ಟಿ ಬರಲಿದ್ದು, ಇದು ವಿನೂತನ ಪ್ರಯತ್ನವಾಗುತ್ತದೆ ಎಂದು ನಾರಾಯಣ ನೇತ್ರಾಲಯದ ಡಾ ಭುಜಂಗ ಶೆಟ್ಟಿ ತಿಳಿಸಿದ್ದಾರೆ.