ಮೊಹಮ್ಮದ್ ಜುಬೇರ್, ರಾಹುಲ್ ಕುರಿತ ಸಿಟಿ ರವಿ ಟ್ವೀಟ್’ಗೆ ಕಾಂಗ್ರೆಸ್ ಕೆಂಡಾಮಂಡಲ

ನವದೆಹಲಿ: ಹಿಂದೂ ದೇವತೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿ ಬಂಧನಕ್ಕೊಳಗಾಗಿರುವ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಹಾಗೂ ರಾಹುಲ್ ಗಾಂಧಿ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಡಿದ್ದ ಟ್ವೀಟ್’ವೊಂದು ಕಾಂಗ್ರೆಸ್ ಕಣ್ಣನ್ನು ಕೆಂಪಗಾಗಿಸಿದೆ. 

ಬುಧವಾರ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಸಿಟಿ ರವಿಯವರು, ಮೊಹಮ್ಮದ್ ಜುಬೇರ್ ಪತ್ರಕರ್ತನಾಗಿದ್ದರೆ, ರಾಹುಲ್ ಗಾಂಧಿ ರಾಷ್ಟ್ರೀಯವಾದಿ. ಜುಬೇರ್, ಅಯೂಬ್, ಸರ್ದೇಸಾಯಿ, ರಾಯ್, ದತ್ ಮತ್ತು ಇತರ ಜಿಹಾದಿ ಅಪರಾಧಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ತಮ್ಮ ಹೇಳಿಕೆಯನ್ನು ಸಾಬೀತುಪಡಿಸಲು ಅಮಾಯಕರನ್ನು ಕೊಲ್ಲುವ ಭಯೋತ್ಪಾದಕರಿಗಿಂತ ಇವರು ಕಡಿಮೆ ಅಪರಾಧಿಗಳಲ್ಲ. ಇಂತಹ ಅನಾಗರಿಕರು ಮತ್ತು ಅವರ ಸಿದ್ಧಾಂತವನ್ನು ಒಳ್ಳೆಯದಕ್ಕಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. 

ಜುಬೇರ್ ಜೊತೆಗೆ ರಾಹುಲ್ ಗಾಂಧಿಯವರನ್ನು ಟೀಕಿಸಿರುವ ಸಿಟಿ ರವಿಯವರ ವಿರುದ್ಧ ಇದೀಗ ಕಾಂಗ್ರೆಸ್ ಕಿಡಿಕಾರಿದೆ. 

ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು ಮಾತನಾಡಿ, “ರಾಹುಲ್ ಗಾಂಧಿ ಅವರ ಮುತ್ತಜ್ಜ ಜವಾಹರಲಾಲ್ ನೆಹರು ಅವರು ಸುಮಾರು 3,200 ದಿನಗಳನ್ನು ಜೈಲಿನಲ್ಲಿ ಕಳೆದರು, ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾಗಿದ್ದರು. ಸಿಟಿ ರವಿ ಕೊಡುಗೆ ಏನು? ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. 

ಹೋರಾಟಗಾರ ಮತ್ತು ವಕೀಲ ವಿನಯ್ ಶ್ರೀನಿವಾಸ ಮಾತನಾಡಿ, “ಜುಬೇರ್ ಮತ್ತು ಆಲ್ಟ್ ನ್ಯೂಸ್ ದೇಶಾದ್ಯಂತ ಸುಳ್ಳು ಸುದ್ದಿಗಳನ್ನು ಮತ್ತು ದ್ವೇಷದ ಭಾಷಣವನ್ನು ವರದಿ ಮಾಡುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ವಿಶ್ವದಾದ್ಯಂತ ಸತ್ಯ-ಪರಿಶೀಲನೆಯ ವೆಬ್‌ಸೈಟ್‌ಗಳು ಪ್ರಮುಖವಾಗಿವೆ. ನಾಗರಿಕರಾಗಿ ನಮಗೆ ಸತ್ಯ ಮತ್ತು ನಿಖರವಾದ ಮಾಹಿತಿ ಪಡೆದುಕೊಳ್ಳುವ ಹಕ್ಕಿದೆ. ಆಲ್ಟ್ ನ್ಯೂಸ್ ಎಂಬುದು ಸತ್ಯ ತಪಾಸಣೆಗೆ ಮೀಸಲಾದ ಸಂಸ್ಥೆಯಾಗಿದೆ. ಜುಬೇರ್ ಅವರನ್ನು ಕೀಳಾಗಿಸುವುದೆಂದರೆ ನಕಲಿ ಸುದ್ದಿ ಮತ್ತು ದ್ವೇಷದ ಭಾಷಣದ ವಿರುದ್ಧದ ಹೋರಾಟವನ್ನು ಕೀಳಾಗಿಸುವುದಾಗಿದೆ ಎಂದು ಹೇಳಿದ್ದಾರೆ. 

ಹೋರಾಟಗಾರ್ತಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಅಧಿಕಾರದಲ್ಲಿರುವ ಸರ್ಕಾರ ಸುಳ್ಳು ಸುದ್ದಿ ಮತ್ತು ದ್ವೇಷದ ಮಾತುಗಳನ್ನು ಪಸರಿಸುತ್ತಿದೆ. ಜುಬೇರ್ ಬಂಧನವು ಯಾವುದೇ ರೀತಿಯ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಮತ್ತು ನಮ್ಮ ಸಾಂವಿಧಾನಿಕ ಮೌಲ್ಯಗಳ ಮೇಲಿನ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.

Latest Indian news

Popular Stories