ಬೆಂಗಳೂರು: ವಿವಾದಗಳನ್ನು ಹೊತ್ತು ಸಾಗುವ ಶ್ರೀರಾಮ ಸೇನೆ ಮುಖಂಡ ಪ್ರಚೋದನಕಾರಿ ಭಾಷಣದಲ್ಲಿ ಎತ್ತಿದ ಕೈ. ಒಂದಲ್ಲ ಒಂದು ವಿವಾದಿತ ವಿಚಾರದಲ್ಲಿ ಮಾತನಾಡುವ ಮುತಾಲಿಕ್ ಇದೀಗ ಮುಂಜಾವಿನ ಅಝಾನ್ ಬದಲಿಗೆ ದೇವಸ್ಥಾನಗಳಲ್ಲಿ ಹನುಮಾ ಚಾಲೀಸಾ ಪಠಿಸುವುದಾಗಿ ಹೇಳಿದ್ದಾರೆ.
ಮಸೀದಿಯ ಧ್ವನಿ ವರ್ಧಕಗಳ ವಿರುದ್ಧ ಸರಕಾರ ಕ್ರಮಕೈಗೊಳ್ಳಲು ವಿಫಲವಾಗಿವೆ. ಇದೀಗ 1000 ದೇವಸ್ಥಾನಗಳಲ್ಲಿ ಹನುಮಾ ಚಾಲಿಸಾವನ್ನು ಮೇ 9 ರಿಂದ ನುಡಿಸಲಾಗುವುದು. ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ಇದಕ್ಕೆ ಒಪ್ಪಿಕೊಂಡಿದ್ದಾರೆಂದು ಮುತಾಲಿಕ್ ತಿಳಿಸಿದ್ದಾರೆ.
ಧಾರ್ಮಿಕ ಸ್ಥಳಗಳಿಂದ ಅನಧಿಕೃತ ಧ್ವನಿವರ್ಧಕಗಳ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಮತ್ತು ಇತರರ ಧ್ವನಿಯನ್ನು ಅನುಮತಿಸುವ ಮಿತಿಯಲ್ಲಿ ನಿಗದಿಪಡಿಸುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲ್ಲಿ ತೋರಿದ ಧೈರ್ಯವನ್ನು ತೋರಿಸಬೇಕೆಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಆಗ್ರಹಿಸಿದ್ದಾರೆ.
“ಕರ್ನಾಟಕದಾದ್ಯಂತ ನಾವು 1,000 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸಂಪರ್ಕಿಸಿದ್ದೇವೆ. ದೇವಾಲಯದ ಅರ್ಚಕರು, ಧರ್ಮದರ್ಶಿಗಳು ಮತ್ತು ಆಡಳಿತ ಸಮಿತಿಗಳು ನಾಳೆಯಿಂದ ಬೆಳಗ್ಗೆ 5 ಗಂಟೆಗೆ (ಹನುಮಾನ್ ಚಾಲೀಸಾ, ಸುಪ್ರಭಾತ, ಓಂಕಾರ ಅಥವಾ ಭಕ್ತಿಗೀತೆಗಳು) ಹಾಕಲು ಒಪ್ಪಿಕೊಂಡಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಮುತಾಲಿಕ್ ಹೇಳಿದರು.