ಅಂಜನಾದ್ರಿಯಲ್ಲಿ ಅನ್ಯಧರ್ಮಿಯರು ವ್ಯಾಪಾರ ಮಾಡದಂತೆ ಹಿಂಜಾವೇ ಹಾಕಿದ್ದ ಬ್ಯಾನರ್ ತೆರವು; ಶೀಘ್ರ ಕೇಸ್!

ಗಂಗಾವತಿ: ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳು ವ್ಯಾಪಾರ ಮಾಡಬಾರದು. ಹಿಂದುಗಳು ಹಿಂದುಗಳಿಗಾಗಿ ಹಿಂದುಗಳಿಗೋಸ್ಕರ್ ಎಂದು ಹಿಂದೂ ಜಾಗರಣಾ ವೇದಿಕೆಯವರು ಆನೆಗೊಂದಿ ಹನುಮನಹಳ್ಳಿ ಹಾಗೂ ಅಂಜನಾದ್ರಿ ಸುತ್ತಲೂ ಹಾಕಿದ್ದ ಬ್ಯಾನರ್ ಮತ್ತು ಬಂಟಿಂಗ್ಸ್ ತಾಲೂಕು ಮತ್ತು ಜಿಲ್ಲಾಡಳಿತ ತೆರವು ಮಾಡಿಲಾಗಿದೆ.  ‌

ಬ್ಯಾನರ್ ಹಾಕಿದವರನ್ನು ಪತ್ತೆ ಮಾಡಿ ಕೇಸ್ ದಾಖಲಿಸಲಾಗುತ್ತದೆ ಎಂದು ಸಹಾಯಕ ಆಯುಕ್ತ ಮತ್ತು ಅಂಜನಾದ್ರಿ ದೇಗುಲದ ವಿಶೇಷ ಅಧಿಕಾರಿ ಬಸವಣೆಪ್ಪ ಕಲಶೆಟ್ಟಿ ತಿಳಿಸಿದ್ದಾರೆ.

ಅಂಜನಾದ್ರಿಯಲ್ಲಿ ಅನ್ಯ ಧರ್ಮದವರು ವ್ಯಾಪಾರ ವಹಿವಾಟು ಮಾಡಬಾರದು. ಹಿಂದುಗಳ ಕ್ಷೇತ್ರದಲ್ಲಿ ಹಿಂದುಗಳೇ ವ್ಯಾಪಾರ ಮಾಡಬೇಕು. ಇದಕ್ಕೆ ಜಿಲ್ಲಾಡಳಿತ ಇತರೆ ಧರ್ಮಿರನ್ನು ಖಾಲಿ ಮಾಡಿಸುವಂತೆ ಹಿಂದೂ ಜಾಗರಣಾ ವೇದಿಕೆಯವರು ಒಂದು ವಾರದ ಮುಂಚೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಮಂಗಳವಾರ ಅಂಜನಾದ್ರಿ ಸುತ್ತಮುತ್ತ ಅನ್ಯ ಧರ್ಮಿಯರು ವ್ಯಾಪಾರ ಮಾಡಬಾರದೆಂದು ಬ್ಯಾನರ್ ಬಂಟಿಂಗ್ಸ್ ಹಾಕಿದ್ದರು. ಸಂಘಪರಿವಾರದವರ ಈ ಕೆಲಸದ ಕುರಿತು ಪ್ರಗತಿಪರರು, ಸಿಪಿಐಎಂ ಹಾಗೂ ಕಾಂಗ್ರೆಸ್ ಪಕ್ಷದವರು ಟೀಕೆ ವ್ಯಕ್ತಪಡಿಸಿದ್ದರು. ಕೂಡಲೇ ಎಚ್ಚತ್ತ ಜಿಲ್ಲಾಡಳಿತ ಹಿಂದೂ ಜಾಗರಣಾ ವೇದಿಕೆಯವರು ಹಾಕಿದ್ದ ಬ್ಯಾನರ್ ತೆರವು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಯು.ನಾಗರಾಜ, ತಾ.ಪಂ.ಇಒ ಮಹಾಂತಗೌಡ ಪಾಟೀಲ್, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಮಂಜುನಾಥ, ಪಿಡಿಒ ಕೆ.ಕೃಷ್ಣಪ್ಪ, ಕಂದಾಯ ನಿರೀಕ್ಷ ಮಂಜುನಾಥ ಸ್ವಾಮಿ ಸೇರಿ ಇತರೆ ಇಲಾಖೆಯವರಿದ್ದರು.

Latest Indian news

Popular Stories