ಬೆಂಗಳೂರು : ಪ್ರತಿ ವರ್ಷದಂತೆ, ಈ ವರ್ಷವೂ ಕರ್ನಾಟಕ ಹೈಕೋರ್ಟ್ಗೆ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಅಕ್ಟೋಬರ್ 11 ರಿಂದ 16ರವರೆಗೆ ರಾಜ್ಯ ಹೈಕೋರ್ಟ್ ಗೆ ದಸರಾ ರಜೆ ನೀಡಲಾಗಿದೆ.
ಈ ಕುರಿತು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಸೂಚನೆಯ ಮೇರೆಗೆ ರಿಜಿಸ್ಟಾರ್ ಕೆ.ಎಸ್.ಭರತ್ ಕುಮಾರ್ ನೋಟಿಫಿಕೇಷನ್ ಹೊರಡಿಸಿದ್ದು, ರಾಜ್ಯ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಹಾಗೂ ಧಾರವಾಡ ಪೀಠಗಳಿಗೆ ಅಕ್ಟೋಬರ್ 11 ರಿಂದ 16ನೇ ತಾರೀಕಿನವರೆಗೆ ದಸರಾ ರಜೆ ನೀಡಲಾಗಿದೆ.
ದಸರಾ ರಜೆಯ ಸಂದರ್ಭದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ತುರ್ತು ಇದ್ದಲ್ಲಿ ಮಧ್ಯಂತರ ಆದೇಶ, ತಡೆಯಾಜ್ಞೆ ಅರ್ಜಿಗಳು ಹಾಗೂ ತಾತ್ಕಾಲಿಕ ನಿರ್ಬಂಧಕಾಜ್ಞೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ತುರ್ತು ಅರ್ಜಿಗಳನ್ನು ಬೆಳಿಗ್ಗೆ 10.30ರಿಂದ 12ರ ನಡುವೆ ಸಲ್ಲಿಸಿದ್ರೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.