ಉಗ್ರವಾದ ಮತ್ತು ಭಯೋತ್ಪಾದನೆ ಇಸ್ಲಾಮಿನ ವಿರುದ್ಧ; ಇಸ್ಲಾಂ ಎಂದರೆ ಶಾಂತಿ ಮತ್ತು ಯೋಗಕ್ಷೇಮ – ಅಜಿತ್ ದೋವಲ್

ಇಂಡೋನೇಷ್ಯಾ: ನಿಮ್ಮೆಲ್ಲರಿಗೂ ತಿಳಿದಿರುವಂತೆ, ನಮ್ಮ ಈ ಎರಡೂ ದೇಶಗಳು (ಭಾರತ- ಇಂಡೋನೇಷಿಯಾ) ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಬಲಿಪಶುಗಳಾಗಿವೆ. ನಾವು ಸಾಕಷ್ಟು ಪ್ರಮಾಣದಲ್ಲಿ ಸವಾಲುಗಳನ್ನು ಜಯಿಸಿದ್ದರೂ, ಗಡಿಯಾಚೆಗಿನ (cross-border terrorism) ಮತ್ತು ಐಸಿಸ್ ಪ್ರೇರಿತ ಭಯೋತ್ಪಾದನೆ (ISIS-inspired Terrorism) ದೇಶಕ್ಕೆ ಬೆದರಿಕೆಯೊಡ್ಡುತ್ತಿದೆ. ಐಸಿಸ್‌ನಿಂದ ಪ್ರೇರಣೆಗೊಂಡು ಭಯೋತ್ಪಾದನೆಗೆ ಇಳಿಯುತ್ತಿರುವ ವ್ಯಕ್ತಿಗಳು, ಭಯೋತ್ಪಾದಕ ತಂಡಗಳು ಮುಂತಾದವುಗಳ ನಿರ್ಮೂಲನೆಗೆ ನಾಗರಿಕ ಸಮಾಜದ ನೆರವು ಅಗತ್ಯ ಅಜಿತ್ ದೋವಲ್ ಹೇಳಿದ್ದಾರೆ.

ಭಾರತ ಮತ್ತು ಇಂಡೋನೇಷ್ಯಾದಲ್ಲಿ ಸರ್ವಧರ್ಮ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಸ್ಲಿಂ ಧರ್ಮಗುರುಗಳ (ಉಲೇಮಾಗಳ) ಪಾತ್ರದ ಕುರಿತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ದೋವಲ್ ಮಾತನಾಡಿದರು. 

ಸಹಿಷ್ಣುತೆ, ಸಾಮರಸ್ಯ (harmony) ಮತ್ತು ಶಾಂತಿಯುತ ಸಹಬಾಳ್ವೆಯನ್ನು (peaceful co-existence) ಉತ್ತೇಜಿಸುವಲ್ಲಿ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಭಾರತ ಹಾಗೂ ಇಂಡೋನೇಷಿಯಾದ ಮುಸ್ಲಿಂ ವಿದ್ವಾಂಸರನ್ನು (Indonesian Ulema) ಒಟ್ಟುಗೂಡಿಸುವುದು ಈ  ಸಮಾವೇಶದ ಉದ್ದೇಶವಾಗಿದೆ. ಇದು ಹಿಂಸಾತ್ಮಕ ಉಗ್ರವಾದ, ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧದ ಹೋರಾಟವನ್ನು ಬಲಪಡಿಸುತ್ತದೆ ಎಂದು ದೋವಲ್ ಹೇಳಿದರು. 

ಉಗ್ರವಾದ (extremism), ಮೂಲಭೂತವಾದ ಮತ್ತು ಧರ್ಮದ ದುರುಪಯೋಗದ ಯಾವುದೇ ಉದ್ದೇಶಗಳು ಯಾವುದೇ ನೆಲೆಯಲ್ಲಿ ಸಮರ್ಥನೀಯವಲ್ಲ. ಇದು ಧರ್ಮಗೆಡಿಸುವ ಯತ್ನವಾಗಿದ್ದು, ಅದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ. ಉಗ್ರವಾದ ಮತ್ತು ಭಯೋತ್ಪಾದನೆ ಇಸ್ಲಾಂನ ಅರ್ಥಕ್ಕೆ ವಿರುದ್ಧವಾಗಿದೆ. ಏಕೆಂದರೆ ಇಸ್ಲಾಂ ಎಂದರೆ ಶಾಂತಿ ಮತ್ತು ಯೋಗಕ್ಷೇಮಕರವಾಗಿ ಇರುವುದು (ಸಲಾಮತಿ/ಅಸಲಾಂ). ಆದರೆ ಉಗ್ರವಾದದಂತ ದುಷ್ಟ ಶಕ್ತಿಗಳಿಗೆ ಒಡ್ಡುತ್ತಿರುವ ವಿರೋಧವನ್ನು ಯಾವುದೇ ಧರ್ಮದೊಂದಿಗಿನ ಘರ್ಷಣೆ ಎಂದು ಬಣ್ಣಿಸಬಾರದು. ಹಾಗೆ ಮಾಡಿದಲ್ಲಿ ಅದು ಕುತಂತ್ರವಾಗುತ್ತದೆ ಎಂದು ಅಜಿತ್ ದೋವಲ್ ಹೇಳಿದರು. 

ಧರ್ಮಗಳ ನಡುವಿನ ಸಂಘರ್ಷ ಎಂದು ಭಾವಿಸುವ ಬದಲು ನಮ್ಮ ಧರ್ಮಗಳಲ್ಲಿ ಇರುವ ಮಾನವತಾವಾದ, ಶಾಂತಿ ಮತ್ತು ತಿಳುವಳಿಕೆಯ ಮೌಲ್ಯಗಳನ್ನು ಪ್ರತಿನಿಧಿಸುವ ನಮ್ಮ ಧರ್ಮಗಳ ನಿಜವಾದ ಸಂದೇಶದ ಮೇಲೆ ಎಲ್ಲರೂ ಗಮನಹರಿಸಬೇಕು. ಮುಸ್ಲಿಂ ಧರ್ಮಗ್ರಂಥ ಕುರಾನ್‌ನಲ್ಲಿ ಇರುವಂತೆ ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಎಲ್ಲಾ ಮಾನವೀಯತೆಯನ್ನು ಕೊಂದಂತೆ ಮತ್ತು ಒಬ್ಬನನ್ನು ಉಳಿಸುವುದು ಮಾನವೀಯತೆಯನ್ನು ಉಳಿಸಿದಂತೆ. 

ಇಸ್ಲಾಂ ಧರ್ಮವೂ ಜಿಹಾದ್ ಅಫ್ಜಲ್ (Jihad Afzal) ಎಂದು ಆದೇಶಿಸುತ್ತದೆ. ಅಂದರೆ ಅದರರ್ಥ ಮನುಷ್ಯನ ಇಂದ್ರಿಯ ಅಥವಾ ಅಹಂಕಾರದ ವಿರುದ್ಧ ಜಿಹಾದ್ (Jihad) ಮಾಡುವುದಾಗಿದ್ದು, ಮುಗ್ಧ ನಾಗರಿಕರ ವಿರುದ್ಧ ಅಲ್ಲ ಎಂದು ದೋವಲ್ ವಿವರಿಸಿದರು. ಈ ಸಮಾವೇಶದಲ್ಲಿ ಎನ್‌ಎಸ್‌ಎ ಅಜಿತ್ ದೋವಲ್ ಅವರ ಆಹ್ವಾನದ ಮೇರೆಗೆ ಒಂಡೋನೇಷ್ಯಾದ ರಾಜಕೀಯ, ಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಮನ್ವಯ ಸಚಿವ ಮೊಹಮ್ಮದ್ ಮಹ್ಫುದ್ ಹಾಗೂ ಇಂಡೋನೇಷ್ಯಾದ ಉಲೇಮಾಗಳ ಉನ್ನತ ನಿಯೋಗದ ಜೊತೆ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. 

Latest Indian news

Popular Stories