ಕಾಮನ್ ವೆಲ್ತ್ ಗೇಮ್ಸ್, ಕ್ರಿಕೆಟ್: ಫೈನಲ್ ನಲ್ಲಿ ಎಡವಿದ ಭಾರತ ವನಿತೆಯರು, ಬೆಳ್ಳಿಗೆ ತೃಪ್ತಿ


ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ವನಿತೆಯ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಎಡವಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಹೌದು.. ನಿನ್ನೆ ನಡೆದ ಪ್ರಬಲ ಆಸ್ಚ್ರೇಲಿಯಾ ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ತಂಡ 9 ರನ್ ಗಳ ವಿರೋಚಿತ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ ತಂಡವು 8 ವಿಕೆಟಿಗೆ 161 ರನ್‌ ಗಳಿಸಿದ್ದರೆ ಭಾರತವು 19.3 ಓವರ್‌ಗಳಲ್ಲಿ 152 ರನ್ನಿಗೆ ಆಲೌಟಾಗಿ ಕೇವಲ 9 ರನ್ ಗಳ ಅಂತರದಲ್ಲಿ ಸೋಲುಂಡಿತು. 

ಭಾನುವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ರೋಚಕ ಪಂದ್ಯದಲ್ಲಿ ಭಾರತವನ್ನು 9 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಬಾರಿ ಟಿ20 ಫೈನಲ್‌ನಲ್ಲಿ ಸೋತ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. 

ಫೈನಲ್‌ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಟಾರ್ ಓಪನರ್ ಬೆಥ್ ಮೂನಿ ಅವರ ಅತ್ಯುತ್ತಮ ಅರ್ಧಶತಕ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ಅವರ ದೊಡ್ಡ ಜೊತೆಯಾಟದ ಆಧಾರದ ಮೇಲೆ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಭಾರತೀಯ ಬೌಲರ್‌ಗಳ ಬಿಗಿ ಪ್ರದರ್ಶನ ಮತ್ತು ರಾಧಾ ಯಾದವ್ ಮತ್ತು ದೀಪ್ತಿ ಶರ್ಮಾ ಅವರ ಅಮೋಘ ಕ್ಯಾಚ್‌ಗಳಿಂದಾಗಿ ಭಾರತ ತಂಡ ಆಸ್ಟ್ರೇಲಿಯಾ ಬಿಗ್ ಸ್ಕೋರ್ ಮಾಡದಂತೆ ತಡೆಯಿತು.

ಈ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭ ಅತ್ಯಂತ ಕಳಪೆಯಾಗಿತ್ತು. ಗುಂಪು ಹಂತ ಮತ್ತು ಸೆಮಿಫೈನಲ್‌ಗಳಲ್ಲಿ ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಈ ಬಾರಿ ಬೇಗನೆ ಪೆವಿಲಿಯನ್ ಸೇರಿದರು. ಜೊತೆಗೆ ಶೆಫಾಲಿ ವರ್ಮಾ ಕೂಡ ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯಲಿಲ್ಲ. ಕೇವಲ 22 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡ ಭಾರತ ತಂಡ ಆರಂಭಿಕ ಆಘಾತ ಎದುರಿಸಿತ್ತು. ಈ ಹಂತದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ಉತ್ತಮ ಜೊತೆಯಾಟ ನೀಡಿದರು. ರೋಡ್ರಿಗಸ್ ನಿಧಾನವಾಗಿ ಆಡುವುದನ್ನು ಮುಂದುವರೆಸಿದರೆ, ಮತ್ತೊಂದು ತುದಿಯಲ್ಲಿದ್ದ ಕ್ಯಾಪ್ಟನ್ ಕೌರ್ ತಮ್ಮ ಎಂದಿನ ಆಕ್ರಮಣಕಾರಿ ಶೈಲಿ ಬ್ಯಾಟಿಂಗ್ ಮುಂದುವರೆಸಿದರು. ಅದ್ಭುತ ಆಟ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಜೆಮಿಮಾ ಮತ್ತು ಹರ್ಮನ್‌ಪ್ರೀತ್ ಕೌರ್ ನಡುವಿನ ಜೊತೆಯಾಟವು ಭಾರತದ ಗೆಲುವಿನ ಭರವಸೆಯನ್ನು ಹೆಚ್ಚಿಸಿತ್ತು.

ಈ ಹಂತದಲ್ಲಿ ಮತ್ತೆ ಭಾರತಕ್ಕೆ ಆಸಿಸ್ ಬೌಲರ್ ಗಳು ಸಂಕಷ್ಟ ಎದುರಿಸುವಂತೆ ಮಾಡಿದರು. 15ನೇ ಓವರ್‌ನಲ್ಲಿ ಜೆಮಿಮಾ ವಿಕೆಟ್‌ನೊಂದಿಗೆ 96 ರನ್‌ಗಳ ಜೊತೆಯಾಟವನ್ನು ಮುರಿದರು. ನಂತರ ಮುಂದಿನ 7 ಎಸೆತಗಳಲ್ಲಿ ಪೂಜಾ ವಸ್ತ್ರಾಕರ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಪೆವಿಲಿಯನ್‌ಗೆ ಮರಳಿದರು. ಸತತ ಆಘಾತಗಳಿಂದ ಭಾರತ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೀಪ್ತಿ ಶರ್ಮಾ ಕೊಂಚ ಸಮಯ ಗೆಲುವಿಗೆ ಪ್ರಯತ್ನಿಸಿದರಾದರೂ ಅವರಿಗೂ ಹೆಚ್ಚು ಕಾಲ ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು, ಆದರೆ ಭಾರತ ತಂಡವು ಕೇವಲ 1 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಇಡೀ ತಂಡವು ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು.

ಆ ಮೂಲಕ ಕೇವಲ 9 ರನ್ ಗಳ ಅಂತರದಲ್ಲಿ ಭಾರತ ಶರಣಾಗೆ ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇನ್ನು ಆಸ್ಚ್ರೇಲಿಯಾ ತಂಡ ಚಿನ್ನ ಗೆದ್ದರೆ, ಮೂರನೇ ಸ್ಥಾನ ಪಡೆದ ನ್ಯೂಜಿಲೆಂಡ್ ವನಿತೆಯರ ತಂಡ ಕಂಚಿನ ಪದಕ ಪಡೆಯಿತು.






Latest Indian news

Popular Stories