ಕುಂದಾಪುರ: ಕೆಟ್ಟು ನಿಂತ ಸ್ಕೂಟರ್ ತಳ್ಳಲು ಹೇಳಿದ್ದಕ್ಕೆ ಹಲ್ಲೆ – ಪ್ರಕರಣ ದಾಖಲು

ಕುಂದಾಪುರ : ಕ್ಷುಲ್ಲಕ ಕಾರಣಕ್ಕೆ ಕುಂದಾಪುರ ಕೋಡಿಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.ಕೋಳಿ ಮಾಂಸವನ್ನು ಲೈನ್ ಸೇಲ್ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಅಮಾಯಕ ಯುವಕನನ್ನು ಥಳಿಸಿದ ಘಟನೆ ಕುಂದಾಪುರ ಸಮೀಪದ ಕೊಡಿಯಲ್ಲಿ ನಡೆದಿದೆ.

ಮೂಡುಗೋಪಾಡಿಯ ಜುನೈದ್ (21) ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ.

ಇವರು ಪ್ರತಿದಿನದಂತೆ ಬುಧವಾರ ಮದ್ಯಾಹ್ನ 1.30 ರ ಸುಮಾರಿಗೆ ಮಹಿಂದ್ರಾ ಜೀತೋ ವಾಹನದಲ್ಲಿ ಕೋಳಿ ಮಾಂಸ ವಿತರಿಸುತ್ತಾ ಕುಂದಾಪುರ ಚರ್ಚ್ ರೋಡಿನಿಂದ ಕೋಡಿ ಕಡೆ ಹೋಗುತ್ತಿರುವಾಗ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ವಾಹನವು ಯಾಂತ್ರಿಕ ದೋಷದಿಂದ ರಸ್ತೆಯಲ್ಲೇ ಸ್ಥಗಿತಗೊಂಡಿತು. ಅದನ್ನು ತಳ್ಳಿ ಚಾಲೂ ಮಾಡಲು ಯತ್ನಿಸುತ್ತಿರುವಾಗ ಅದೇ ರಸ್ತೆಯ ವಿರುದ್ದ ದಿಕ್ಕಿನಿಂದ ಬಂದ ಗಿರೀಶ್ ಎನ್ನುವ ವ್ಯಕ್ತಿ ವಾಹನವನ್ನು ಬದಿಗೆ ನಿಲ್ಲಿಸಲು ಹೇಳಿದರು. ಅದಕ್ಕೆ ಡ್ರೈವರ್ ವಾಹನ ಕೆಟ್ಟಿದೆ, ಚಾಲೂ ಆಗುತ್ತಿಲ್ಲ ದೂಡಬೇಕು, ತನ್ನೊಬ್ಬನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿ, ಸ್ವಲ್ಪ ವಾಹನ ನೂಕಲು ಸಹಾಯ ಮಾಡಿ ಎಂದು ಮನವಿ ಮಾಡಿದರು.

ಈ ಕ್ಷುಲ್ಲಕ ಕಾರಣಕ್ಕೇ ಗಿರೀಶ್ ಕೋಪಗೊಂಡು ನನ್ನನ್ನೇ ವಾಹನ ದೂಡಲು ಹೇಳುವೆಯಾ ಎಂದು ಕೈ ಯಿಂದ ಹಲ್ಲೆ ಮಾಡಿದರು. ಜುನೈದ್ ಅವರಲ್ಲಿ ಪರಿಸ್ಥಿತಿಯನ್ನು ವಿವರಿಸಿದರೂ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ಥಳಿಸಿದರು ಎನ್ನಲಾಗಿದೆ. ಇದೇ ವೇಳೆ ಗಿರೀಶ್ ಗೆಳೆಯ ಜಿತೇಂದ್ರ ಎನ್ನುವವನು ಅಲ್ಲಿಗೆ ಬಂದು ಸೇರಿಕೊಂಡು ಇಬ್ಬರೂ ಡ್ರೈವರ್ ಜುನೈದ್ ಗೆ ಅವಾಚ್ಯ ಶಬ್ದಗಳಿಂದ ಬೈದು ಬಾಟ್ಲಿಯಿಂದ ಹಲ್ಲೆ ಮಾಡಿರುತ್ತಾರೆ ಎಂದು ಹೇಳಲಾಗಿದೆ.

ಹಲ್ಲೆ ಮಾಡಿದ ಕೋಡಿಯ ಗಿರೀಶ್ ಹಾಗೂ ಜಿತೇಂದ್ರ ಎಂಬಿಬ್ಬರು ಸಂಘ ಪರಿವಾರದವರು ಎನ್ನಲಾಗಿದ್ದು, ಇವರ ವಿರುದ್ದ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಯಿಂದ ಗಾಯಗೊಂಡ ಜುನೈದ್ ರನ್ನು ಹಾಗೂ ವಿದ್ಯಾರ್ಥಿ ಮೊಹಮ್ಮದ್ ಬಾತೀಶ್ ನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Indian news

Popular Stories