ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಧು ಜಿ. ಮಾದೇಗೌಡ ಪಡೆದ ಒಟ್ಟು ಮತಗಳ ಸಂಖ್ಯೆ 45,275 ಆಗಿದ್ದು, 12,205 ಮತಗಳ ಅಂತರದಿಂದ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.
ಗೆಲುವಿಗೆ ನಿಗದಿಯಾದ 46,083 ಮತಗಳ ಕೋಟಾವನ್ನ ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿಯ ಮೈ. ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಮತ ಪಡೆಯಲಾಯ್ತು. ಆ ಮೂಲಕ ನಿಗಧಿತ ಕೋಟಾವನ್ನು ಕೈ ಅಭ್ಯರ್ಥಿ ತಲುಪಿದರು. ಬಿಜೆಪಿ ಒಟ್ಟು 33,878 ಮತ ಪಡೆದು ಮೈ.ವಿ. ರವಿಶಂಕರ್ ಸೋಲು ಅನುಭವಿಸಿದರು. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು 19,630 ಮತ ಪಡೆದು ಹೀನಾಯ ಸೋಲು ಕಂಡರು.
ಮಧು ಜಿ ಮಾದೇಗೌಡ ಗೆಲುವಿನ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಾಲ್ಕು ಸ್ಥಾನಗಳಿಗೆ ಚುನಾವಣೆಯಾಗಿತ್ತು. ನಿನ್ನೆ ಕೌಂಟಿಂಗ್ ಶುರುವಾಗಿ ಮೈಸೂರು ಮತ ಎಣಿಕೆ ಮುಂದುವರೆದಿತ್ತು. ಮೊದಲ ಪ್ರಾಶಸ್ತ್ಯದ ಮತ ಎಲಿಮೇನೇಟ್ ಹಂತಕ್ಕೆ ಹೋಗಿತ್ತು. ಇದೀಗ ಎರಡನೇ ಪ್ರಾಶಸ್ತ್ಯ ಮತಗಳಿಂದ ನಮ್ಮ ಅಭ್ಯರ್ಥಿ ೧೨೨೦೫ ಮತಗಳಿಂದ ಮಧು ಮಾದೇಗೌಡ ಗೆಲುವು ಸಾದಿಸಿದ್ದಾರೆ ಎಂದರು.
ಕಾಂಗ್ರೆಸ್ ಗೆ ಪ್ರತಿಸ್ಪರ್ಧಿ ಆಗಿದ್ದ ಎಂ.ವಿ.ರವಿಶಂಕರ್ ೩೬ ಸಾವಿರ ಮತಗಳು ಬಂದಿವೆ. ನಮ್ಮ ಅಭ್ಯರ್ಥಿಗೆ ೪೬ ಸಾವಿರ ಮತ ಬಂದಿವೆ. ಜೆಡಿಎಸ್ ಅಭ್ಯರ್ಥಿಗೆ ೧೯ ಸಾವಿರ ಮತ ಬಂದಿವೆ. ನಾವು ಪದವೀಧರ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ. ಶಿಕ್ಷಕರ ಕ್ಷೇತ್ರದಲ್ಲಿ ನಾವು ಗೆಲ್ಲುತ್ತಿದ್ದೆವು. ಇದು ಮೊದಲ ಬಾರಿ ಗೆಲುವಾಗಿದೆ. ಜೆಡಿಎಸ್, ಬಿಜೆಪಿಯವರು ನಮ್ಮ ಭದ್ರಕೋಟೆ ಅಂತ ಹೇಳ್ತಿದ್ರು. ಮಧುಮಾದೇಗೌಡಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ವಾಯುವ್ಯ ಪದವೀಧರ ಕ್ಷೇತ್ರದಲ್ಲೂ ಸೋತಿದ್ದೇವೆ ಎಂದ ಸಿದ್ದರಾಮಯ್ಯ, ಹೊರಟ್ಟಿ ಜೆಡಿಎಸ್ ನಿಂದ ಗೆದ್ದು ಬಿಜೆಪಿಗೆ ಹೋಗಿದ್ರು. ಬಿಜೆಪಿಯಲ್ಲೂ ಅವರು ಗೆದ್ದಿದ್ದಾರೆ. ನಮ್ಮವರು ಸೋತಿದ್ರೂ ಹೆಚ್ಚಿನ ಮತ ಗಳಿಸಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲೂ ನಮಗೆ ಗೆಲುವಾಗಿದ್ದು, ಪ್ರಕಾಶ್ ಹುಕ್ಕೇರಿ ಗೆಲುವು ಸಾಧಿಸಿದ್ದಾರೆ. ಅಲ್ಲಿ ಎರಡು ಬಾರಿ ಬಿಜೆಪಿ ಗೆದ್ದಿತ್ತು. ೨೦೧೦, ೧೬ ರಲ್ಲಿ ಅರುಣ್ ಶಹಾಪೂರ ಗೆದ್ದಿದ್ದರು. ಶಹಾಪೂರ ಸೋಲಿಸಿ ಪ್ರಕಾಶ್ ಹುಕ್ಕೇರಿ ಗೆದ್ದಿದ್ದಾರೆ. ಈ ಕ್ಷೇತ್ರವೂ ಮೂರು ಜಿಲ್ಲೆಗೆ ಸೇರಲಿದೆ. ಅಲ್ಲಿನ ಶಿಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲಿನ ನಮ್ಮ ಎಲ್ಲ ಲೀಡರ್ ಗೆ ಕೃತಜ್ಙತೆ ಸಲ್ಲಿಸ್ತೇನೆ ಎಂದರು.
ಈ ಚುನಾವಣೆಗಳ ಬಳಿಕ ಜನ ಬದಲಾವಣೆಯನ್ನ ಬಯಸಿದ್ದಾರೆ. ಬಿಜೆಪಿಯವರು ನಾಲ್ಕೂ ಗೆಲ್ತೇವೆ ಅಂತ ಜಂಭ ಪಟ್ಟಿದ್ರು. ಸ್ವತಃ ಸಿಎಂ ಹೋಗಿ ಪ್ರಚಾರ ಮಾಡಿದ್ರು. ನಮಗೆ ಸಂಪನ್ಮೂಲ ಕೊರತೆ ಇದ್ರೂ ಗೆದ್ದಿದ್ದೇವೆ. ಇದು ಮುಂದಿನ ಚುನಾವಣೆಗೆ ದಿಕ್ಸೂಚಿ ಅನ್ನಲ್ಲ. ಕಾಂಗ್ರೆಸ್ ಪರವಾದ ವಾತಾವರಣವಿದೆ ಅನ್ನುತ್ತೇನೆ. ಮುಂದಿನ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ತೇವೆ. ನಾವೂ ಏನೂ ಇಲ್ಲದ ಕಡೆ ಗೆದ್ದಿದ್ದೇವೆ. ಜೀರೋ ಇದ್ದವರು ನಾವು ಎರಡು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ದೇಶವನ್ನ ಅದೋಗತಿಗೆ ಬಿಜೆಪಿ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.