ವಾಷಿಂಗ್ಟನ್ ಡಿಸಿ: ಪ್ರಧಾನಿ ನರೇಂದ್ರ ಮೋದಿಯವರ ಇಸ್ಲಾಮೋಫೋಬಿಕ್ ನೀತಿಗಳ ಕುರಿತು ಚರ್ಚಿಸುತ್ತಿರುವಾಗ, ಅಮ್ನೆಸ್ಟಿ ಇಂಟರ್ನ್ಯಾಶನಲ್ ಯುಎಸ್ಎ, ಜೆನೋಸೈಡ್ ವಾಚ್ ಮತ್ತು ಯುಎಸ್ಎಯ ಇತರ 17 ಮಾನವ ಹಕ್ಕುಗಳ ಸಂಸ್ಥೆಗಳು ಗುರುವಾರ ಭಾರತದಲ್ಲಿನ ಮುಸ್ಲಿಮರ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಕಾಂಗ್ರೆಷನಲ್ ಬ್ರೀಫಿಂಗ್ನಲ್ಲಿ ಮುಸ್ಲಿಮರ ಮೇಲಿನ ದ್ವೇಷದ ಕುರಿತು ನಡೆದ ಚರ್ಚೆಯಲ್ಲಿ, ಇತ್ತೀಚಿನ ಹರಿದ್ವಾರ ದ್ವೇಷದ ಸಮಾವೇಶದಲ್ಲಿ ವಿವಿಧ ಗುಂಪುಗಳು ಮುಸ್ಲಿಮರ ನರಮೇಧದ ಕರೆಗಳನ್ನು ನೀಡಿದ್ದರ ಕುರಿತು ಚರ್ಚಿಸಲಾಯಿತು. ಪರಿಸ್ಥಿತಿ ಹದಗೆಟ್ಟರೆ ದೇಶವು ಸಾಮೂಹಿಕ ಹಿಂಸಾಚಾರ ಮತ್ತು ಮುಸ್ಲಿಮರ ಹತ್ಯಾಕಾಂಡಗಳಿಗೆ ಹೇಗೆ ಸಾಕ್ಷಿಯಾಗಬಹುದು ಎಂಬುದರ ಕುರಿತು ಸಭೆಯಲ್ಲಿ ಹಾಜರಿದ್ದ ತಜ್ಞರು ಮಾತನಾಡಿದರು.
ಉತ್ತರ ಭಾರತದ ಹರಿದ್ವಾರ ನಗರದಲ್ಲಿ ಕಳೆದ ತಿಂಗಳು ನಡೆದ ಕೇಸರಿ ವಸ್ತ್ರಧಾರಿ ಹಿಂದೂ ಸನ್ಯಾಸಿಗಳ ಸಭೆಯು “ಮುಸ್ಲಿಮರ ನರಮೇಧವನ್ನು ಪ್ರಚೋದಿಸುವ ಗುರಿಯನ್ನು ಹೊಂದಿತ್ತು” ಎಂದು ಜೆನೋಸೈಡ್ ವಾಚ್ನ ಅಧ್ಯಕ್ಷ ಡಾ. ಗ್ರೆಗೊರಿ ಸ್ಟಾಂಟನ್ ಹೇಳಿದ್ದಾರೆ. “ಭಾರತದ ನಾಯಕರಾಗಿ, ಅವರು ಈ ನರಮೇಧದ ಭಾಷಣವನ್ನು ಖಂಡಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ … ಆದರೂ, ನರೇಂದ್ರ ಮೋದಿ ಅದರ ವಿರುದ್ಧ ಮಾತನಾಡಲಿಲ್ಲ ಎಂದು ಅಭಿಪ್ರಾಯ ಪಟ್ಟರು.
ಮೋದಿಯವರ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಈ ವಾರ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಧರ್ಮ ಸಂಸದ್ನ ಬಹಿರಂಗ ಪ್ರಚೋದನೆ ಮತ್ತು ದ್ವೇಷವನ್ನು ಸಮರ್ಥಿಸಿಕೊಂಡಿರುವುದು ಪ್ರಸ್ತುತ ವಾತಾವರಣದ ಗಂಭೀರತೆಯ ಮೇಲೆ ಬೆಳಕು ಚೆಲ್ಲುತ್ತದೆ. ಭಾರತದ ಮುಸ್ಲಿಮರ ವಿರುದ್ಧ ಉತ್ತುಂಗದ ದ್ವೇಷ ಮತ್ತು ಧರ್ಮಾಂಧತೆ ಎತ್ತಿ ತೋರಿಸಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್’ನ ಗೋವಿಂದ್ ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
“ಯುಎಸ್ ಹತ್ಯಾಕಾಂಡದ ಸ್ಮಾರಕ ವಸ್ತುಸಂಗ್ರಹಾಲಯದ ಸಂಶೋಧನೆಯ ಪ್ರಕಾರ, ಭಾರತವು ಹೆಚ್ಚಿನ ಅಪಾಯದಲ್ಲಿದೆ. ಭಾರತದಲ್ಲಿ ವ್ಯಕ್ತಪಡಿಸುತ್ತಿರುವ ದ್ವೇಷವು ಅತ್ಯಂತ ಗಂಭೀರ ಮಟ್ಟದಲ್ಲಿದೆ ಎಂಬುದನ್ನು ಗುರುತಿಸಲು ನಾವು ನಿಮ್ಮೆಲ್ಲರಿಗೂ ಕರೆ ನೀಡುತ್ತೇವೆ. ಬಿಡೆನ್ ಆಡಳಿತವು ಹಿಂದಿನ ತಪ್ಪುಗಳನ್ನು ಪುನರಾವರ್ತಿಸಲು ನಾವು ಬಿಡುವುದಿಲ್ಲ, ”ಎಂದು ಪತ್ರಿಕಾ ಟಿಪ್ಪಣಿ ಹೇಳಿದೆ.
ಈ ಸಂದರ್ಭದಲ್ಲಿ 2002 ರ ಗುಜರಾತ್ ಗಲಭೆಗಳು, “ಬುಲ್ಲಿ ಬಾಯಿ” ಬ್ಯಾನರ್ ಅಡಿಯಲ್ಲಿ ಗಿಟ್ ಹಬ್ ಪ್ಲಾಟ್ಫಾರ್ಮ್ನಲ್ಲಿ ಮುಸ್ಲಿಂ ಮಹಿಳೆಯರ ಇತ್ತೀಚಿನ “ಹರಾಜು” ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಚರ್ಚಿಸಲಾಗಿದೆ. ಬಿಜೆಪಿಯು ದೇಶದ ಮುಸ್ಲಿಂ ನಾಗರಿಕರನ್ನು ಮೌನವಾಗಿಸಲು, ಹೊರಹಾಕಲು ಉತ್ಸುಕವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.