ಕಾನ್ಪುರ : ನ.25ರಿಂದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಉತ್ತರಪ್ರದೇಶದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಡುವ ಭಾರತೀಯ ಕ್ರಿಕೆಟಿಗರಿಗೆ ಹಲಾಲ್ ಮಾಡಿದ ಮಾಂಸವನ್ನೇ ನೀಡಬೇಕು ಎಂದು ಬಿಸಿಸಿಐ ಆದೇಶಿಸಿದೆ.
ಆದರೆ ಇದೀಗ ಬಿಜೆಪಿ ವಲಯದಲ್ಲಿ ಇದು ಕೋಲಾಹಲಕ್ಕೆ ಕಾರಣವಾಗಿದೆ. ಸ್ವತಃ ಬಿಜೆಪಿ ವಕ್ತಾರ ಗೌರವ್ ಗೋಯೆಲ್ ಇದನ್ನು ವಿರೋಧಿಸಿ, ತಕ್ಷಣ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಬಿಸಿಸಿಐನ ಯಾವುದೇ ಪದಾಧಿಕಾರಿಗಳು ಪ್ರತಿಕ್ರಿಯಿಸಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಕ್ರಿಕೆಟಿಗರು ತಮಗಿಷ್ಟ ಬಂದ ಯಾವುದೇ ಆಹಾರವನ್ನು ತಿನ್ನಲು ಸ್ವತಂತ್ರರು. ಆದರೆ ಹಲಾಲ್ ಮಾಡಿದ ಮಾಂಸವನ್ನೇ ತಿನ್ನಬೇಕು ಎಂದು ಆದೇಶಿಸಲು ಬಿಸಿಸಿಐ ಯಾರು? ಇದು ಕಾನೂನುಬಾಹಿರ, ಹೀಗೆ ನಡೆಯಲು ನಾವು ಬಿಡುವುದಿಲ್ಲ ಎಂದು ಗೌರವ್ ಕಿಡಿಕಾರಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿ ಡಯೆಟ್ ಉದ್ದೇಶದಿಂದ ಈ ರೀತಿಯ ಆಹಾರಕ್ರಮವನ್ನು ಸಿದ್ಧಪಡಿಸಿದ್ದಾರೆ.
ಹಲಾಲ್ ಮಾಂಸದಲ್ಲಿ ಪ್ರಾಣಿಗಳ ರಕ್ತ ಸಂಪೂರ್ಣ ಹರಿದು ಹೋಗುವುದರಿಂದ ಅತ್ಯಂತ ಶುದ್ದ ಮತ್ತು ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ಈ ವೈಜ್ಞಾನಿಕ ಆದೇಶ ನೀಡಲಾಗಿದೆ. ಬಿಜೆಪಿ ಇಲ್ಲೂ ರಾಜಕೀಯ ಮಾಡುತ್ತಿರುವುದನ್ನು ಹಲವು ಮಂದಿ ವಿವರಿಸಿದ್ದಾರೆ.