ಮಹಿಳೆ ಮೇಲೆ ಹಲ್ಲೆ ಎಸಗಿ ಪರಾರಿಯಾಗಿದ್ದ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿ ಸೇರಿ ಮೂವರ ಬಂಧನ

ನೋಯ್ಡಾ: ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿ, ಹಲ್ಲೆ ನಡೆಸಿದ್ದ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ನೋಯ್ಡಾದ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿಯನ್ನು ಮೀರತ್‌ನಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಗಿ ಅವರ ಮೂವರು ಸಹಚರರನ್ನು ಕೂಡ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳು ಬುಲ್ಡೋಜರ್ ಬಳಸಿ ತ್ಯಾಗಿ ಅವರ ನೋಯ್ಡಾ ನಿವಾಸದ ಹೊರಗಿನ ಅಕ್ರಮ ಕಟ್ಟಡವನ್ನು ನೆಲಸಮ ಮಾಡಿದ್ದರು. ತ್ಯಾಗಿ ಅವರು, ತಮ್ಮ ಫ್ಲ್ಯಾಟ್‌ನ ಮುಂಭಾಗದಲ್ಲಿರುವ ಪ್ರದೇಶದ ಒಂದು ಭಾಗವನ್ನು ಪಿಲ್ಲರ್‌ಗಳು ಮತ್ತು ಟೈಲ್ಸ್‌ಗಳನ್ನು ಬಳಸಿ ತಾತ್ಕಾಲಿಕ ರಚನೆಗಳನ್ನು ನಿರ್ಮಿಸಿ ಒತ್ತುವರಿ ಮಾಡಿಕೊಂಡಿದ್ದರು. ಅಲ್ಲದೆ, ತಮ್ಮ ನಿವಾಸದ ಎದುರಿನ ಉದ್ಯಾನದಲ್ಲೂ ಗಿಡಗಳನ್ನು ನೆಟ್ಟಿದ್ದರು.

ಶುಕ್ರವಾರ ಸಂಜೆಯಿಂದ ತಲೆಮರೆಸಿಕೊಂಡಿದ್ದ ತ್ಯಾಗಿ, ಶರಣಾಗತಿ ಸಂಬಂಧಿತ ಕಾರ್ಯವಿಧಾನಗಳ ಮನವಿಯೊಂದಿಗೆ ಗೌತಮ್ ಬುದ್ಧ ನಗರ ಜಿಲ್ಲೆಯ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆಯನ್ನು ಆ. 10ಕ್ಕೆ ನಿಗದಿ ಮಾಡಲಾಗಿತ್ತು.

ಶುಕ್ರವಾರ ರಾತ್ರಿ ತಾನು ತಲೆಮರೆಸಿಕೊಳ್ಳುವವರೆಗೂ ತ್ಯಾಗಿ, ತನಗೆ ಬಿಜೆಪಿಯೊಂದಿಗೆ ಸಂಬಂಧವಿದೆ ಎಂದೇ ಹೇಳಿದ್ದರು. ಆದರೆ, ಆಡಳಿತ ಪಕ್ಷವು ತ್ಯಾಗಿ ಅವರೊಂದಿಗೆ ಯಾವುದೇ ಸಂಬಂಧವನ್ನು ನಿರಾಕರಿಸಿತ್ತು. ಈ ವಿಚಾರವಾಗಿ ಪ್ರತಿಪಕ್ಷಗಳೂ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು.

ಸೊಸೈಟಿಯ ಸಾಮಾನ್ಯ ಪ್ರದೇಶದಲ್ಲಿ ಗಿಡಗಳನ್ನು ನೆಡುವುದನ್ನು ವಿರೋಧಿಸಿದ ಗ್ರ್ಯಾಂಡ್ ಓಮ್ಯಾಕ್ಸ್‌ನ ಸಹ ನಿವಾಸಿ ಮಹಿಳೆಯ ಮೇಲೆ ತ್ಯಾಗಿ ಅವರು ಸ್ಫೋಟಕಗಳನ್ನು ಎಸೆದಿದ್ದರು ಮತ್ತು ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

Latest Indian news

Popular Stories