ಶಾರೂಕ್ ಖಾನ್ ಪುತ್ರ ಆರ್ಯನ್ ಮತ್ತು ಆರು ಮಂದಿಗೆ 14 ದಿನ ನ್ಯಾಯಾಂಗ ಬಂಧನ

ಮುಂಬೈ: ಹಡಗಿನಲ್ಲಿ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಮರ್ಚೆಂಟ್ ಮತ್ತಿತರ ಆರು ಮಂದಿಯನ್ನು ಮುಂಬೈಯ ಸ್ಥಳೀಯ ಕೋರ್ಟ್ ವೊಂದು ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಶೇಷ ಎನ್ ಡಿಪಿಎಸ್ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ನ್ಯಾಯಾಲಯ ಹೇಳಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಈ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತಿತರ ಏಳು ಮಂದಿಯನ್ನು ಮತ್ತೆ ಎನ್ ಸಿಬಿ ಕಸ್ಟಡಿಗೆ ನೀಡಲು ನ್ಯಾಯಾಲಯ ನಿರಾಕರಿಸಿದೆ. ಪ್ರಕರಣದ ತನಿಖೆಗಾಗಿ ತನಿಖಾಧಿಕಾರಿಗೆ ಸೂಕ್ತ ಸಮಯ ನೀಡಿರುವುದರಿಂದ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ನಿರ್ಲೆಕರ್ ಹೇಳಿದ್ದಾರೆ.

ವಿಚಾರಣೆಗಾಗಿ ತನಿಖೆಗೆ ಪಡೆಯುವುದು ಅವರ ಹಕ್ಕು ಎಂದು ಹೇಳಿರುವುದರಲ್ಲಿ ಯಾವುದೇ ಅನುಮಾನವಿಲ್ಲ, ಸುಮ್ಮನೆ ಆರೋಪಿಗಳನ್ನು ಎನ್ ಸಿಬಿ ಕಸ್ಟಡಿಗೆ ನೀಡುವುದು ಸಂವಿಧಾನದತ್ತ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್ಯನ್ ಖಾನ್, ಅರ್ಬಾಜ್ ಮತ್ತು ಮರ್ಚೆಂಟ್ ಅವರಿಂದ 2.6 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅವರನ್ನು ಸೋಮವಾರದವರೆಗೂ ವಶಕ್ಕೆ ನೀಡುವಂತೆ ಎನ್ ಸಿಬಿ ಕೋರಿತ್ತು. ಆರ್ಯನ್ ಖಾನ್ ತಮ್ಮ ಕಸ್ಟಡಿಯಲ್ಲಿದ್ದರೆ ಮತ್ತಷ್ಟು ಆರೋಪಿಗಳನ್ನು ಬಂಧಿಸಬಹುದು ಎಂಬ ಆಧಾರದಲ್ಲಿ ಎನ್ ಸಿಬಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಬಯಸಿತ್ತು.

ಮುಂಬೈ ಕರಾವಳಿಯಲ್ಲಿ ಗೋವಾಕ್ಕೆ ತೆರಳುತ್ತಿದ್ದ ಹಡಗು ಒಂದರಲ್ಲಿ ಪತ್ತೆಯಾದ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣದಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಅವರನ್ನು ಭಾನುವಾರ ಎನ್ ಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರ್ಯನ್ ಮತ್ತಿತರ ಇಬ್ಬರು ಆರೋಪಿಗಳ ವಾಟ್ಸಾಪ್ ಚಾಟ್ ನಲ್ಲಿ ಆಘಾತಕಾರಿ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಈ ಹಿಂದೆ ಎನ್ ಸಿಬಿ ನ್ಯಾಯಾಲಯಕ್ಕೆ ಹೇಳಿತ್ತು.

ತನ್ನ ಕಕ್ಷಿದಾರರನಿಂದ ಡ್ರಗ್ಸ್ ವಶಕ್ಕೆ ಪಡೆದಿಲ್ಲ ಎಂದು ಆರ್ಯನ್ ಪರ ವಕೀಲರು ಹೇಳಿದ್ದರು. ಶನಿವಾರ ರಾತ್ರಿ ಮುಂಬೈಯಿಂದ ಗೋವಾಕ್ಕೆ ತೆರಳುತ್ತಿದ್ದ ಹಡಗಿನ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು.

Latest Indian news

Popular Stories