7ಸಾವಿರ ಕಿಮೀ ರಸ್ತೆ ದುರಸ್ತಿಗಾಗಿ 310 ಕೋಟಿ ರು. ಅನುದಾನ ಬಿಡುಗಡೆ ಮಾಡಿದ ಲೋಕೋಪಯೋಗಿ ಇಲಾಖೆ

ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದ ನಂತರ ರಾಜ್ಯಾದ್ಯಂತ ರಸ್ತೆಗಳು ಮತ್ತು ನಾಗರಿಕ ಮೂಲಸೌಕರ್ಯಗಳು ಹಾನಿಗೊಳಗಾಗಿದ್ದು, ಲೋಕೋಪಯೋಗಿ ಇಲಾಖೆಯು ದುರಸ್ತಿ ಕಾರ್ಯದಲ್ಲಿ ನಿರತರವಾಗಿದೆ.

ಸುಮಾರು 7,000 ಕಿ.ಮೀ ರಸ್ತೆಗಳು ಹಾಳಾಗಿದ್ದು, ಇದರಲ್ಲಿ 4,850 ಕಿ.ಮೀ ಜಿಲ್ಲಾ ರಸ್ತೆಗಳು ಮತ್ತು 2,236 ಕಿ.ಮೀ ರಾಜ್ಯ ಹೆದ್ದಾರಿಗಳಾಗಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 1,500 ಕ್ಕೂ ಹೆಚ್ಚು ಸೇತುವೆಗಳು ಮತ್ತು ಕಲ್ವರ್ಟ್‌ಗಳು ಹಾನಿಗೊಳಗಾಗಿದ್ದು, ದುರಸ್ತಿ ಮಾಡುವ ಅವಶ್ಯಕತೆಯಿದೆ.

ಸುಮಾರು 3,500 ಕೋಟಿ ರೂ.ಗಳಷ್ಟು ಹಾನಿಯಾಗಿದ್ದು, ದುರಸ್ತಿಗೆ ಅಂದಾಜು 730 ಕೋಟಿ ರೂ.ಗಳ ಅಗತ್ಯವಿದೆ ಎಂದು ಹೇಳಲಾಗಿದೆ, ನಾಲ್ಕು ವಲಯಗಳಿಗೆ 310 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, 766 ಯೋಜನೆಗಳು ಪ್ರಗತಿಯಲ್ಲಿವೆ. ಉತ್ತರ ವಲಯಕ್ಕೆ 230 ಕೋಟಿ, ಕೇಂದ್ರ ವಲಯಕ್ಕೆ 38 ಕೋಟಿ ಹಾಗೂ ಈಶಾನ್ಯ ವಲಯಕ್ಕೆ 15 ಕೋಟಿ ರೂ. ಮಂಜೂರು ಮಾಡಲಾಗಿದೆ.

ಇದಲ್ಲದೇ ದಕ್ಷಿಣ ವಲಯಕ್ಕೆ 45 ಕೋಟಿ, ಉತ್ತರ ವಲಯಕ್ಕೆ 70 ಕೋಟಿ, ಕೇಂದ್ರ ವಲಯಕ್ಕೆ 81 ಕೋಟಿ ಹಾಗೂ ಈಶಾನ್ಯ ವಲಯಕ್ಕೆ 55 ಕೋಟಿ ಹೆಚ್ಚುವರಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದ ಸಚಿವ ಸಿ.ಸಿ.ಪಾಟೀಲ್ ಮಾರ್ಚ್ ಅಂತ್ಯದೊಳಗೆ ಎಲ್ಲಾ ಬಾಕಿ ಕಾಮಗಾರಿಗಳು ಪೂರ್ಣಗೊಳಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ವಿಶೇಷವಾಗಿ ಕರಾವಳಿ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಕಾಲ್ನಡಿಗೆ ಸೇತುವೆಗಳು ಹಾನಿಗೊಳಗಾಗಿವೆ, ಮರದ ಸೇತುವೆಗಳ ನಿರ್ಮಾಣವು ಸುರಕ್ಷತೆಯನ್ನು ಒದಗಿಸುತ್ತವೆ, ಇದಕ್ಕಾಗಿ ಹಿಂದಿನ ಬಜೆಟ್‌ನಲ್ಲಿ ಮೀಸಲಿಟ್ಟ 200 ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ನರಗುಂದ-ಬೆಳವಂಕಿ-ಸಿಂಧನೂರು ರಸ್ತೆ 141 ಕಿ.ಮೀ., ಸಂಕೇಶ್ವರ-ಗೋಕಾಕ-ನರಗುಂದ ಹೆದ್ದಾರಿ 127 ಕಿ.ಮೀ., ಗದಗ-ಮುಂಡರಗಿ-ಜಗಳೂರು ರಸ್ತೆ 260 ಕಿ.ಮೀ ಹಾಗೂ ತಡಸ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲು ಇಲಾಖೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Latest Indian news

Popular Stories