ಉಡುಪಿ: ಬಹು ಚರ್ಚಿತ ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಪರದಾಟವೂ ಇದರಿಂದ ಆರಂಭಗೊಂಡಂತಾಗಿದೆ. ಕಾಮಗಾರಿ ಎಂದ ಮೇಲೆ ನಾಗರಿಕರಿಗೆ ಸಮಸ್ಯೆಯಾಗುವುದು ಸಾಮಾನ್ಯ. ಆದರೆ ಈ ಸಮಸ್ಯೆಯ ಮಟ್ಟ ತಗ್ಗಿಸಲು ಹಲವು ರೀತಿಯ ಕ್ರಮಕೈಗೊಳ್ಳಬೇಕಾಗಿರುವುದು ಸಂಬಂಧ ಪಟ್ಟ ಇಲಾಖೆಯ ಕರ್ತವ್ಯವಾಗಿದೆ.
ಇದೀಗ ಅಂಬಲಪಾಡಿ ಜಂಕ್ಷನ್ ಇಕ್ಕೆಲದ ಸರ್ವಿಸ್ ರಸ್ತೆಯಲ್ಲಿ ಹೆದ್ದಾರಿಯಿಂದ ಬರುವ ವಾಹನಗಳಿಗೆ ಚಲಿಸಲು ಅನುವು ಮಾಡಿಕೊಡಲಾಗಿದ್ದು ಸರ್ವಿಸ್ ರಸ್ತೆ ಕಿರಿದಾಗಿರುವ ಕಾರಣ ವಾಹನ ದಟ್ಟಣೆ ಕಂಡು ಬರುತ್ತಿದೆ. ಸರ್ವಿಸ್ ರಸ್ತೆಗಳಲ್ಲಿ ಎರಡು ಕಡೆಯಿಂದ ವಾಹನಗಳು ಸಂಚರಿಸುವ ಕಾರಣ ವಾಹನ ಸವಾರರು ಈ ಕಿರಿದಾದ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿ ಪರಿಣಮಿಸಿದೆ. ಹಾಗಾಗಿ ಕಾಮಗಾರಿಯ ಸಂದರ್ಭದಲ್ಲಿ ತಾತ್ಕಾಲಿಕವಾಗಿಯಾದರೂ ಸರ್ವಿಸ್ ರಸ್ತೆ ಅಗಲೀಕರಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯ ನಡುವೆ ಅಗಲವಾದ ಡಿವೈಡರ್ ಇದ್ದು ತಾತ್ಕಾಲಿಕವಾಗಿ ಸರ್ವಿಸ್ ರಸ್ತೆ ಅಗಲೀಕರಣಕ್ಕೆ ಆ ಸ್ಥಳವನ್ನು ಬಳಸಿಕೊಳ್ಳಬಹುದಾಗಿದೆ. ಕಾಮಗಾರಿ ಮುಗಿಯಲು ಕನಿಷ್ಠ ಎರಡು ವರ್ಷ ಸಮಯ ತಗಲುವುದರಿಂದ ಅಷ್ಟು ದೀರ್ಘ ಸಮಯ ವಾಹನ ಸವಾರರು ವಾಹನ ದಟ್ಟಣೆಯ ಕಿರಿಕಿರಿ ತಪ್ಪಿಸಲು ಸರ್ವಿಸ್ ರಸ್ತೆ ಅಗಲೀಕರಣಗೊಳಿಸಿ ತಾತ್ಕಾಲಿಕ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ತೀರಾ ಅಗತ್ಯ.
