ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಮನೆಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿ ಪತ್ತೆಯಾಗಿದ್ದಾನೆ.
ಮೃತರನ್ನು ವಿನಯ್ ಶ್ರೀವಾಸ್ತವ ಎಂದು ಗುರುತಿಸಲಾಗಿದ್ದು, ಠಾಕೂರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶೋರ್ ಅವರ ಮನೆ ಬೆಗಾರಿಯಾ ಗ್ರಾಮದ ನಿವಾಸದಲ್ಲಿ ಮುಂಜಾನೆ 4.15 ರ ಸುಮಾರಿಗೆ ಗುಂಡು ಹಾರಿಸಲಾಗಿರುವ ಕುರಿತು ವರದಿಯಾಗಿದೆ. ಘಟನಾ ಸ್ಥಳದಿಂದ ಪರವಾನಗಿ ಪಡೆದ ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಅದು ಕಿಶೋರ್ ಅವರ ಮಗ ವಿಕಾಸ್ ಕಿಶೋರ್ ಅವರದ್ದಾಗಿದೆ ಎಂದು ವರದಿಯಾಗಿದೆ.
ಶ್ವಾನದಳ, ಅಪರಾಧ ವಿಭಾಗ ಮತ್ತು ವಿಧಿವಿಜ್ಞಾನ ತಂಡಗಳು ತನಿಖೆಗಾಗಿ ಸ್ಥಳದಲ್ಲಿವೆ ಎಂದು ಲಕ್ನೋ ಪಶ್ಚಿಮದ ಡಿಸಿಪಿ ರಾಹುಲ್ ರಾಜ್ ತಿಳಿಸಿದ್ದಾರೆ.
“ವಿನಯ್ ಶ್ರೀವಾಸ್ತವೆ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಿಕಾಸ್ ಕಿಶೋರ್ ಅವರ ಬಳಿಯಿದ್ದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಫೋರೆನ್ಸಿಕ್ ತಂಡವೂ ಆಗಮಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಶೋಧಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ’ ಎಂದು ರಾಹುಲ್ ರಾಜ್ ಸುದ್ದಿಗಾರರಿಗೆ ತಿಳಿಸಿದರು.
ಸಂತ್ರಸ್ತ ಕುಟುಂಬಕ್ಕೆ ಬೆಂಬಲ ನೀಡುವುದಾಗಿ ಬಿಜೆಪಿ ಸಂಸದ ಕೌಶಲ್ ಕಿಶೋರ್ ಭರವಸೆ ನೀಡಿದ್ದು, ಅಪರಾಧಿಯನ್ನು ಬಿಡುವುದಿಲ್ಲ ಎಂದಿದ್ದಾರೆ.
“ಇದು ತನಿಖೆಯ ವಿಷಯವಾಗಿದೆ. ಫೊರೆನ್ಸಿಕ್ ತಂಡಗಳು ಮತ್ತು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಭಾಗಿಯಾಗಿರುವ ವ್ಯಕ್ತಿಯನ್ನು ಬಿಡಲಾಗುವುದಿಲ್ಲ. ನಾವು ಮೃತರ ಕುಟುಂಬ ಸದಸ್ಯರ ಬೆಂಬಲಕ್ಕೆ ನಿಂತಿದ್ದೇವೆ. ಘಟನೆಯ ಸಮಯದಲ್ಲಿ ನಿವಾಸದಲ್ಲಿ ಯಾರಿದ್ದರು ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.