ಬೊಮ್ಮಾಯಿ ಕಾಲದಲ್ಲೇ 40 ಪರ್ಸೆಂಟ್ ಕಮಿಷನ್ ಬಂದದ್ದು: ಸಿದ್ದರಾಮಯ್ಯ

ಹಾವೇರಿ(ಶಿಗ್ಗಾವಿ)(ನ.05): ಕೊರೋನಾ ಸಂದರ್ಭದಲ್ಲಿ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬಸವರಾಜ ಬೊಮ್ಮಾಯಿ. ಇವರ ಕಾಲದಲ್ಲೇ 40 ಪರ್ಸೆಂಟ್ ಕಮಿಷನ್ ಬಂದಿದ್ದು. ಶಿಗ್ಗಾಂವಿ ಕ್ಷೇತ್ರಕ್ಕೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರ ಕೊಡುಗೆ ಏನು?ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶಿಗ್ಗಾಂವಿ ಕ್ಷೇತ್ರದ ಹುಲಗೂರು, ಹುರಳಿಕುಪ್ಪಿ, ಬಂಕಾಪುರದಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಯಾಸೀರ್ಖಾನ್ ಪಠಾಣ ಪರ ಪ್ರಚಾರ ನಡೆಸಿ ಮಾತನಾಡಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಹಿಂದುಳಿದವರಿಗೆ, ದಲಿತರಿಗೆ, ಮಹಿಳೆಯರಿಗೆ, ಬಡವರಿಗೆ ಇಂತಿಂಥ ಕೆಲಸ ಮಾಡಿದ್ದೇವೆ ಎಂದು ಜನರಿಗೆ ಹೇಳಲು ಅವರ ಬಳಿ ಏನೂ ಇಲ್ಲ.
ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಈ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರುವ ಬೊಮ್ಮಾಯಿ ಈ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಶಿಗ್ಗಾಂವಿ, ಸವಣೂರು ಏತ ನೀರಾವರಿಗೆ ಹಣ ಕೊಟ್ಟವರು ನಾವು. ಬೊಮ್ಮಾಯಿಯವರೇ ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಆರೋಪಿಸಿದರು.