ಬಿಹಾರದಲ್ಲಿ ಎನ್‌ಡಿಎ ವಿರುದ್ಧ ಮೈತ್ರಿಕೂಟ

ನವದೆಹಲಿ: ರಾಷ್ಟ್ರೀಯ ಜನತಾ ದಳದ ನಾಯಕ ಶ್ಯಾಮ್ ರಜಾಕ್ ಅವರು ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ್ದು, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ಮೈತ್ರಿಕೂಟ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿಯಿಂದ ತೇಜೋವಧೆಗೊಳಗಾಗಿ ಸದ್ಯ ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಳ್ಳುವ ತವಕದಲ್ಲಿರುವ ಶ್ಯಾಮ್ ರಜಾಕ್ ಅವರು, ಈ ಬಗ್ಗೆ ಪಾಸ್ವಾನ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದ ಮತ್ತು ಈಗ ಆರ್‌ಜೆಡಿಯಲ್ಲಿರುವ ರಜಾಕ್ ಅವರು, `ಪಾಸ್ವಾನ್ ಅವರ ಮನೆಗೆ ಭೇಟಿ ನೀಡಿದ್ದು ‘ವೈಯಕ್ತಿಕ’. ಆದರೆ, ರಾಜಕಾರಣಿಗಳು ಭೇಟಿಯಾದಾಗ ರಾಜಕೀಯದ ಮಾತುಕತೆಗಳು ಕೂಡ ನಡೆಯುತ್ತವೆ’ ಎಂದು ಹೇಳಿದ್ದಾರೆ.
ದಲಿತ ಮತ್ತು ಹಿಂದುಳಿದ ಜಾತಿಗಳ ಹಿತಾಸಕ್ತಿಗಳಿಗಾಗಿ ಬಿಜೆಪಿ ವಿರೋಧಿ ಮೈತ್ರಿ ಕಟ್ಟುವ ಅವಶ್ಯಕತೆಯಿದೆ ಎಂದು ಆರ್‌ಜೆಡಿ ಮುಖಂಡ ಪ್ರತಿಪಾದಿಸಿದ್ದಾರೆ.
ಎಲ್‌ಜೆಪಿಯ ಇತರೆ ನಾಲ್ಕು ಸಂಸದರೊAದಿಗೆ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರಿಗೆ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನ ದೊರೆತಿದೆ.
ಆರ್‌ಜೆಡಿ ನಾಯಕರು ಚಿರಾಗ್ ಪಾಸ್ವಾನ್ ಅವರನ್ನು ಬೆಂಬಲಿಸಿ ಮಾತನಾಡುತ್ತಿದ್ದು, ಬಿಹಾರದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದೊಂದಿಗೆ ಕೈಜೋಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಸದ್ಯ ಪಾಸ್ವಾನ್ ಅವರೊಂದಿಗೆ ಯಾವುದೇ ಶಾಸಕರು ಇಲ್ಲದಿದ್ದರೂ ಕೂಡ, ಬಿಜೆಪಿಯೊಂದಿಗಿನ ಸಂಬAಧವನ್ನು ಕಡಿದುಕೊಂಡು ಪ್ರತಿಪಕ್ಷಗಳ ಬಣಕ್ಕೆ ಸೇರುವ ಪಾಸ್ವಾನ್ ಅವರ ನಿರ್ಧಾರದಿಂದ ವಿಪಕ್ಷಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗುತ್ತಿದೆ.

Latest Indian news

Popular Stories