ಅಪ್ಪು ಸಾವಿನ ಆಘಾತ: ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತ್ಯು

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಬೆಳಗಾವಿಯ ಅಭಿಮಾನಿಯೋರ್ವ ಸಾವಿಗೀಡಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಅಪ್ಪುವಿನ ಅಪ್ಪಟ ಅಭಿಮಾನಿ ಆಗಿದ್ದ ಶಿಂಧೋಳ್ಳಿ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಎಂಬ ಯುವಕ ಕೊನೆಯುಸಿರೆಳೆದಿದ್ದಾನೆ. ಪುನೀತ್ ರಾಜಕುಮಾರ ಸಾವಿನ ಸುದ್ದಿ ಕೇಳಿ ಶುಕ್ರವಾರ ಸಂಜೆಯಿಂದ ಟಿವಿ ಎದುರು ಕುಳಿತಿದ್ದನು. ಸಾವಿನಿಂದ ಆಘಾತಗೊಂಡು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮಾಳಿ ಕೆಲಸ ಮಾಡುತ್ತಿದ್ದ ಪರುಶರಾಮ ದೇಮಣ್ಣವರ ಶಿವರಾಜ್ ಕುಮಾರ ಹಾಗೂ ಪುನೀತ್ ರಾಜಕುಮಾರನ ಅಪ್ಪಟ ಅಭಿಮಾನಿ ಆಗಿದ್ದನು. ಚಿತ್ರ ಬಿಡುಗಡೆ ಆದಾಗ ಮೊದಲ ಶೋ ನೋಡಲು ಹೋಗುತ್ತಿದ್ದನು. ಶುಕ್ರವಾರ ಕೆಲಸ ಮುಗಿಸಿಕೊಂಡು ಬಂದು ಟಿವಿ ಎದುರು ಕುಳಿತಿದ್ದನು. ಅಪ್ಪುವಿನ ಪಾರ್ಥೀವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಶುಕ್ರವಾರ ರಾತ್ರಿ ಆಘಾತಗೊಂಡು ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೊದಲಿನಿಂದಲೂ ಶಿಂಧೋಳಿ‌ ಗ್ರಾಮದಲ್ಲಿ ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ. ಸುಮಾರು 17 ವರ್ಷಗಳ ಹಿಂದೆ ‘ತವರಿಗೆ ಬಾ ತಂಗಿ’ ಸಿನಿಮಾ ಪ್ರಚಾರದ ವೇಳೆ ಶಿವರಾಜ್ ಕುಮಾರ್ ಶಿಂಧೋಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಪರುಶರಾಮ ಓಡಾಡಿಕೊಂಡಿದ್ದನು.

Latest Indian news

Popular Stories