ಇ-ಕೆವೈಸಿ ಕಾರ್ಯ ಮರು ಪ್ರಾರಂಭ

ಬೀದರ್ ಜುಲೈ 01 (ಕರ್ನಾಟಕ ವಾರ್ತೆ): ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಕುಟುಂಬ ಸದಸ್ಯರೆಲ್ಲರು ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ವಿವರ ದೃಢೀಕರಿಸುವ ಹಾಗೂ ಬಯೋಮೆಟ್ರಿಕ್ ನೀಡುವ ಕಾರ್ಯವನ್ನು ಕೋವಿಡ್-19ರ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಇ-ಕೆವೈಸಿ ಕಾರ್ಯ ಮರು ಪ್ರಾರಂಭಿಸುವ ಬಗ್ಗೆ ನಿರ್ದೇಶನಗಳ ಬಂದಿದ್ದು, ಸದರಿ ಇ-ಕೆವೈಸಿ ಮಾಡುವಾಗ ಪಡಿತರ ಚೀಟಿದಾರರ ಈ ಕೆಳಕಂಡ ಅಂಶಗಳನ್ನು ಆಹಾರ ಇಲಾಖೆಯ ತಂತ್ರಾಂಶದಲ್ಲಿ ನಮೂದಿಸತಕ್ಕದ್ದು, ಹಾಗೂ ಈ ಕೂಡಲೇ ಕಾರ್ಯ ಮರುಪ್ರಾರಂಭಿಸಲು ಜುಲೈ 01 ರಿಂದ 10 ವರೆಗೆ ಚಾಲ್ತಿಯಲ್ಲಿ ಇರುತ್ತದೆ.
ಬಯೋ ದೃಢಿಕರಣ (ಬೆರಳಚ್ಚು ಹೊಂದಾಣಿಕೆ),ಪಡಿತರ ಚೀಟಿಯಲ್ಲಿ ಕುಟುಂಬದ ಹಿರಿಯ ಮಹಿಳೆಯನ್ನು ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವುದು. ನಂತರ ಪಡಿತರ ಚೀಟಿಯಲ್ಲಿನ ಹಿರಿಯ ಮಹಿಳೆಗೆ ಕುಟುಂಬದ ಸದಸ್ಯರು ಆಗುವ ಸಂಬಂಧ ಸರಿಪಡಿಸುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಡಿತರ ಚೀಟಿದಾರರು ತಮ್ಮ ಕುಟುಂಬದ ಒಬ್ಬ ಸದಸ್ಯರ ಆರ್.ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವುದು, ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಅಡುಗೆ ಅನಿಲ ಸಂಪರ್ಕ (ಗ್ಯಾಸ್ ಸಿಲಿಂಡರ್) ಹೊಂದಿರುವ ಮಾಹಿತಿ ಸಲ್ಲಿಸುವುದು, ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಹೊಂದಿರುವ ಮೊಬೈಲ್ ಸಂಖ್ಯೆ ಸಲ್ಲಿಸುವುದು, ಯಾವುದೇ ಪಡಿತರ ಚೀಟಿಯಲ್ಲಿನ ಸದಸ್ಯರು ಮರಣ ಹೊಂದಿರುವ, ಎಂಡೋಸಲ್ಫಾನ್ ಪೀಡಿತ, ವಯೋವೃದ್ಧ, ಕುಷ್ಠ ರೋಗ, ಮತ್ತು ಇತ್ಯಾದಿ ಕಾರಣಗಳಿಂದಾಗಿ ಬೆರಳಚ್ಚು ಹೊಂದಾಣಿಕೆ ಮಾಡಲು ಮತ್ತು ಬರಲು ಆಗದೇ ಇದ್ದಲ್ಲಿ ಮಾಹಿತಿ ನೀಡುವುದು,ಇ-ಕೆವೈಸಿ ಸಂಗ್ರಹಣೆಯ ಕಾರ್ಯ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.
ಇ-ಕೆವೈಸಿ ಮಾಹಿತಿ ಸಂಗ್ರಹಣೆ ಕಾರ್ಯವನ್ನು ಮಾಡುವುದಕ್ಕಾಗಿ ಸರ್ಕಾರವೇ ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಿದ್ದು ಪಡಿತರ ಚೀಟಿದಾರರು ಈ ಪ್ರಕ್ರಿಯೆಗೆ ಯಾವುದೇ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿರುತ್ತದೆ, ಇ-ಕೆವೈಸಿ ಎಲ್ಲಾ ಪಡಿತರ ಚೀಟಿಗಳ ಎಲ್ಲಾ ಸದಸ್ಯರು ಕಡ್ಡಾಯವಾಗಿ ಮಾಡಿಸಿಕೊಳ್ಳುವುದು, ಇ-ಕೆವೈಸಿ ಆಗದೇ ಇರುವಂತಹ ಪಡಿತರ ಚೀಟಿಯಲ್ಲಿಯ ಸದಸ್ಯರಿಗೆ ಮುಂಬರುವ ದಿನಗಳಲ್ಲಿ ಪಡಿತರ (ರೇಷನ್) ಲಭ್ಯವಾಗುವುದಿಲ್ಲವೆಂದು ತಿಳಿಸಲಾಗಿದೆ, ಕೋವಿಡ್-19ರ ನಿಯಮಗಳು ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories