ಮಂಗಳೂರು: ಸಿಡಿಲಬ್ಬರಕ್ಕೆ ಮೂರು ದಿನಗಳಲ್ಲಿ ನಾಲ್ವರು ಮೃತ್ಯು

ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಕಂಚಿಬೈಲು ಅರ್ಬಿ ಫಾಲ್ಸ್‌ ಬಳಿಯಲ್ಲಿ ಶೆಡ್ಡೊಂದಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಮೂವರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಚಿಬೈಲು ಪದವು ನಿವಾಸಿಗಳಾದ ಶ್ರೀನಿವಾಸ ಎಂಬವರ ಪುತ್ರ ಯಶವಂತ (22) ಹಾಗೂ ರತ್ನಾಕರ ಎಂಬವರ ಪುತ್ರ ಮಣಿಪ್ರಸಾದ್‌ (25) ಸಿಡಿಲಿಗೆ ಬಲಿಯಾದವರು.

ಗಣೇಶ, ಪ್ರವೀಣ ಮತ್ತು ಸಂದೀಪ್‌ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಶವಂತ್‌ ತರಕಾರಿ ವ್ಯಾಪಾರಿಯಾಗಿದ್ದು, ಮಣಿಪ್ರಸಾದ್‌ ಖಾಸಗಿ ಸಂಸ್ಥೆಯಲ್ಲಿಉದ್ಯೋಗಿಯಾಗಿದ್ದಾರೆ. ಉಳಿದ ಮೂವರು ಕೂಲಿ ಕಾರ್ಮಿಕರಾಗಿದ್ದರು. ಇವರೆಲ್ಲರೂ ಅಕ್ಕಪಕ್ಕದ ನಿವಾಸಿಗಳಾಗಿದ್ದು ಸ್ನೇಹಿತರಾಗಿದ್ದರು.

ಸಂಜೆ ವೇಳೆ ಸಮೀಪದಲ್ಲಿ ಹರಿಯುತ್ತಿದ್ದ ನದಿ ಬದಿಗೆ ಬಂದಿದ್ದರು. ಈ ಸಂದರ್ಭ ಮಳೆ ಸಹಿತ ಭಾರೀ ಗುಡುಗು ಮಿಂಚು ಅಪ್ಪಳಿಸಿದ್ದು ಪಕ್ಕದಲ್ಲಿದ್ದ ಪಂಪ್‌ ಶೆಡ್‌ವೊಂದರಲ್ಲಿಆಶ್ರಯ ಪಡೆದುಕೊಂಡಿದ್ದರು. ಆಗ ಶೆಡ್ಡಿಗೆ ಸಿಡಿಲು ಬಡಿದು ಘಟನೆ ಸಂಭವಿಸಿದೆ.

ಪುತ್ತೂರು ತಾಲೂಕಿನ ದರ್ಬೆತ್ತಡ್ಕ ನಿವಾಸಿ ಪುರುಷೋತ್ತಮ ಪೂಜಾರಿ (45) ಶನಿವಾರ ಸಂಜೆ ಸಿಡಿಲಿಗೆ ಬಲಿಯಾಗಿದ್ದರೆ, ಭಾನುವಾರ ಸಂಜೆ ಉಳ್ಳಾಲ ಸಮೀಪದ ಹರೇಕಳ ನಿವಾಸಿ ಅಬ್ದುಲ್‌ ರಹಿಮಾನ್‌ ಸಿಡಿಲು ಬಿಡದು ಮೃತಪಟ್ಟಿದ್ದರು.

Latest Indian news

Popular Stories