ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ ಚಟುವಟಿಕೆ ನಿಷೇಧ

ಹೊಸಪೇಟೆ(ವಿಜಯನಗರ),ಜೂ.04(ಕರ್ನಾಟಕ ವಾರ್ತೆ): ಜೂ.01 ರಿಂದ ಸೆ.30ರ ವರೆಗಿನ ಅವಧಿಯಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೀನಿನ ಸಂತಾನೋತ್ಪತ್ತಿ ಕಾರ್ಯದ ಸಮಯವಾದ್ದರಿಂದ ಮತ್ತು ಜಲಾಶಯದ ಒಳ ಹರಿವು ತೀವ್ರವಾಗಿದ್ದು, ಎಲ್ಲಾ ರೀತಿಯ ಮೀನುಗಾರಿಕೆ ಹಾಗೂ ಸಂಬಂಧಿಸಿದ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತುಂಗಭದ್ರ ಡ್ಯಾಂ, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಸೆ.30ರವರೆಗಿನ ಅವಧಿಯಲ್ಲಿ ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಠಿಣ ಹಾಗೂ ತೀವ್ರವಾದ ಕ್ರಮಗಳನ್ನು ಜರುಗಿಸುವುದರ ಜೊತೆಗೆ ಮೀನುಗಾರಿಕೆ ಪರಿಕರಗಳನ್ನು ಜಪ್ತಿ ಮಾಡಲಾಗುವುದು. ಸೂಚನೆ ಮೀರಿ ಮೀನುಗಾರಿಕೆ ಕೆಲಸಕ್ಕೆ ಮುಂದಾದ ಸಂದರ್ಭದಲ್ಲಿ ಸಂಭವಿಸುವ ಯಾವುದೇ ಅಹಿತಕರ ಘಟನೆಗಳಿಗೆ, ಯಾವುದೇ ನಷ್ಟಗಳಿಗೆ ತುಂಗಭದ್ರಾ ಮಂಡಳಿಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಮೀನುಗಾರರು, ಈ ಅವಧಿಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಮೀನುಗಾರಿಕೆ ನಡೆಸಬಾರದು ಎಂದು ಅವರು ತಿಳಿಸಿದ್ದಾರೆ.

Latest Indian news

Popular Stories