ಕೇಜ್ರಿವಾಲ್‌ ಮೇಲೆ ಜನರಿಗೆ ನಂಬಿಕೆಯಿದೆ: ಎಎಪಿ ಮತ್ತೆ ಅಧಿಕಾರಕ್ಕೆ; ಸಿಸೋಡಿಯಾ

ನವದೆಹಲಿ: ‘ದೆಹಲಿಯ ಜನರು ಎಎಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ’ ಎಂದು ಎಎ‍ಪಿ ನಾಯಕ ‌ಮನೀಶ್ ಸಿಸೋಡಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದು ಕೇಂದ್ರ ಗೃಹ ಸಚಿವಾಲಯದ ವೈಫಲ್ಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

2013, 2015 ಮತ್ತು 2019ರಲ್ಲಿ ಕಾಂಗ್ರೆಸ್‌ ಜತೆ ಯಾವುದೇ ಮೈತ್ರಿ ಇಲ್ಲದೇ ಎಎಪಿ ಸ್ಪರ್ಧಿಸಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲಲಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಶಿಕ್ಷಣ, ಆರೋಗ್ಯ, ವಿದ್ಯುತ್ ಮತ್ತು ನೀರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅರವಿಂದ ಕೇಜ್ರಿವಾಲ್‌ ಉತ್ತಮ ಕೆಲಸಗಳನ್ನು ಮಾಡಿದ್ದರು. ಮಹಿಳೆಯ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಹೀಗಾಗಿ ದೆಹಲಿಯ ಜನರು ಕೇಜ್ರಿವಾಲ್‌ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.

ಒಂದು ದೇಶ, ಒಂದು ಚುನಾವಣೆ’ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಬಿಜೆಪಿಯ ಚುನಾವಣಾ ತಂತ್ರ. ಆದರೆ ‘ಒಂದು ಚುನಾವಣೆ, ಒಂದೇ ಶಿಕ್ಷಣ’ ಸೂತ್ರವನ್ನು ಜಾರಿಗೆ ತರುವುದು ಉತ್ತಮ. ಇದರಿಂದ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದೂ ಹೇಳಿದ್ದಾರೆ.

Latest Indian news

Popular Stories