2023 ನವೆಂಬರ್ 12 ರಂದು ಉಡುಪಿಯ ನೇಜಾರಿನ ತೃಪ್ತಿ ಲೇಔಟ್ ನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ನಡೆದು ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಪ್ರಕರಣದ ವಿಚಾರಣೆ ಉಡುಪಿಯ ವಿಚಾರಣಾ ನ್ಯಾಯಾಲಯದಲ್ಲಿ ಮುಂದುವರಿದಿದೆ. ಆರೋಪಿ ಪ್ರವೀಣ್ ಚೌಗಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದೇನೆ.
ಆದಷ್ಟು ಶೀಘ್ರ ವಿಚಾರಣೆ ಮುಕ್ತಾಯಗೊಂಡು ಆರೋಪಿಗೆ ಶಿಕ್ಷೆಯಾಗಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಸಿಗಲಿ ಎಂಬುವುದು ಎಲ್ಲರ ಆಶಯ.
ಈ ಕೊಲೆ ಪ್ರಕರಣ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಜಾತಿ ಮತ ಧರ್ಮದ ಎಲ್ಲೇ ಮೀರಿ ಈ ಕೃತ್ಯವನ್ನು ಖಂಡಿಸಿದ್ದರು. ಸಂತ್ರಸ್ಥರಿಗಾಗಿ ನಾಗರಿಕರು ಮಿಡಿದಿದ್ದರು. ದೀಪಾವಳಿಯದ್ದೇ ಆ ದಿನ ಈ ಕೃತ್ಯ ನಡೆದ ಕಾರಣ ಸ್ಥಳೀಯರು ಅಂದು ದೀಪಾವಳಿಯನ್ನು ಕೂಡ ಅತ್ಯಂತ ಸರಳವಾಗಿ ಆಚರಿಸಿ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದರು.
ಹಸೀನಾ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ಇಡೀ ಉಡುಪಿ ಜಿಲ್ಲೆಗೊಂದು ಕಪ್ಪು ಚುಕ್ಕೆ. ಈ ಪ್ರಕರಣ ಗಂಭೀರ ಸ್ವರೂಪದ ಪ್ರಕರಣವಾಗಿದ್ದ ಕಾರಣ ಇದನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿ ಶೀಘ್ರ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಬೇಕೆಂಬ ಬೇಡಿಕೆಯೂ ಇದುವರೆಗೆ ಈಡೇರಿಲ್ಲ. ಇದೀಗ ಉಡುಪಿ ನ್ಯಾಯಾಲಯದಲ್ಲಿ ಪ್ರಕರಣ ಸಾಕ್ಷಿ ವಿಚಾರಣೆ ಹಂತಕ್ಕೆ ಬಂದಿದ್ದು ಆದಷ್ಟು ಶೀಘ್ರ ಪ್ರಕ್ರಿಯೆ ಮುಗಿದು ಆರೋಪಿಯ ಅಪರಾಧ ಸಾಬೀತಾಗಿ ಶಿಕ್ಷೆ ಸಿಗಲಿದೆಯೆಂಬ ನಿರೀಕ್ಷೆಯಲ್ಲಿ ಸಂತ್ರಸ್ಥ ಕುಟುಂಬ ಇದೆ.