ಕುಂದಾಪುರ:ಅನ್ನಭಾಗ್ಯದ ಅಕ್ಕಿ ಲಾರಿಯಲ್ಲಿ ಅಕ್ರಮ ಸಾಗಾಟ – ಇಬ್ಬರ ಬಂಧನ

ಕುಂದಾಪುರ: ಅನ್ನಭಾಗ್ಯದ ಅಕ್ಕಿಯನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್‌ ಕೆ. ನೇತೃತ್ವದ ತಂಡ ಬೈಂದೂರು ಸಮೀಪದ ಯಡ್ತರೆ ಬಳಿ ಬಂಧಿಸಿದೆ.

ಲಾರಿಯಬಚಾಲಕ ಬೆಂಗಳೂರು ದಕ್ಷಿಣ ಹೊನ್ನಗಟ್ಟಿ ನಿವಾಸಿ ಸುನೀಲ್‌ ಹೆಚ್‌.ಆರ್‌ (22) ಮತ್ತು ಭಟ್ಕಳ ನಿವಾಸಿ ಮಹಮ್ಮದ್‌ ಸಮೀರ (25) ಬಂಧಿತ ಆರೋಪಿಗಳು.

ಜೂ. 22 ರಂದು ಡಿವೈಎಸ್ಪಿ ಶ್ರೀಕಾಂತ್‌ ಕೆ. ಅವರು ಗಸ್ತಿನಲ್ಲಿರುವಾಗ ಶಿರೂರು ಕಡೆಯಿಂದ ಒಂದು ಟಾಟಾ ಕಂಪೆನಿಯ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ತೆರಳಿ ಸಿಬ್ಬಂದಿಗಳೊಂದಿಗೆ ಹಾಗೂ ಬೈಂದೂರು ಆಹಾರ ನಿರೀಕ್ಷಕರು, ಗ್ರಾಮ ಲೆಕ್ಕಿಗರೊಂದಿಗೆ ಕಾದುಕೊಂಡಿರುವಾಗ ಶಿರೂರು ಕಡೆಯಿಂದ ಒಂದು ಟಾಟಾ ಕಂಪೆನಿಯ ಲಾರಿ ಬರುವುದನ್ನು ನೋಡಿ ಸಿಬ್ಬಂದಿಗಳ ಸಹಾಯದಿಂದ ಲಾರಿಯನ್ನು ನಿಲ್ಲಿಸಿದ್ದಾರೆ.

ಈ ವೇಳೆ ಆರೋಪಗಳನ್ನು ಲಾರಿಯಲ್ಲಿರುವ ಲೋಡಿನ ಬಗ್ಗೆ ವಿಚಾರಿಸಿದಾಗ ಅಕ್ಕಿಯ ಚೀಲಗಳು ಎಂಬುದಾಗಿ ತಿಳಿಸಿದ್ದಾನೆ. ಲಾರಿಯೊಳಗಿರುವ ಅಕ್ಕಿಯ ಚೀಲಗಳ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಲ್ಲಿ ಸರಕಾರದಿಂದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಎಂಬುದಾಗಿ ತಿಳಿಸಿದ್ದಾನೆಂದು‌ ದೂರಿನಲ್ಲಿ ವಿವರಿಸಲಾಗಿದೆ.

ಲಾರಿಯಲ್ಲಿ 320 ಬಿಳಿ ಪಾಲಿಥೀನ್ ಚೀಲಗಳು ಇದ್ದು ಪರಿಶೀಲಿಸಿದಾಗ ಪ್ರತಿ ಚೀಲವು 50 ಕೆಜಿ ಇದ್ದು ಒಟ್ಟು 16 ಟನ್ ನಷ್ಟು ಅಕ್ಕಿ ಇದ್ದಿತ್ತು. ಈ ಪಡಿತರ ಅಕ್ಕಿ ಮೌಲ್ಯ 4 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೊಲೀಸರು ಲಾರಿ ಹಾಗೂ ಚಾಲಕನ ಸಿಟಿನ ಬದಿಯಲ್ಲಿ 3 ಗೋಣಿ ಚೀಲಗಳು ಹಾಗೂ ಚೀಲವನ್ನು ಹೊಲಿಯುವ ಯಂತ್ರ, 320 ಅಕ್ಕಿ ತುಂಬಿದ ಚೀಲಗಳು, 3 ಗೋಣಿ ಚೀಲಗಳು ಹಾಗೂ ಚೀಲ ಹೊಲಿಯುವ ಯಂತ್ರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಉಡುಪಿ ಪ್ರತಿನಿಧಿ

Latest Indian news

Popular Stories