ಕಾರವಾರ: ಚನ್ನಪಟ್ಟಣದಲ್ಲಿ ಗೆಲುವು ಖಂಡಿತ ಎಂದು ಡೆಪ್ಯೂಟಿ ಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಮರಳುವ ಮುನ್ನ ಮುರುಡೇಶ್ವರ ಗಾಲ್ಫ್ ಕ್ಲಬ್ ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳ ಜೊತೆಗೆ ಶುಕ್ರವಾರ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಗೆದ್ದಿರಲಿಲ್ಲ. ಈ ಬಾರಿ ಗೆಲುವು ಖಂಡಿತ ಎಂದರು. ಪರಿಸ್ಥಿತಿ ಭಿನ್ನವಾಗಿದೆ. ಸರ್ಕಾರ ಗ್ಯಾರಂಟಿಯನ್ನು ಕೊಟ್ಟ ಮಾತಿನಂತೆ ಅನುಷ್ಠಾನ ಮಾಡಿದೆ. ಜನರು ಸರ್ಕಾರದ ಪರ ಇದ್ದಾರೆ. ಕಾದು ನೋಡಿ ಎಂದರು.
ಈಗ ಬಿತ್ತರವಾಗುತ್ತಿರುವ ಎಲ್ಲಾ ಎಕ್ಸಿಟ್ ಪೋಲ್ ಗಳು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಸೋಲು ಎನ್ನುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ನಾಳೆ ತನಕ ಕಾಯೋಣ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 16 ಸಾವಿರ ಮತಗಳು ಮಾತ್ರ ದೊರೆತಿದ್ದವು. ಆದರೆ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸ ನನಗಿದೆ ಎಂದರು. ರಾಮನಗರದಲ್ಲಿ ಇಕ್ಬಾಲ್ ಹುಸೇನ್, ಮಾಗಡಿಯಲ್ಲಿ ಬಾಲಕೃಷ್ಣ, ಕನಕಪುರದಲ್ಲಿ ನಾನು ಗೆದ್ದಿದ್ದೆವು ಎಂದರು.
ಎಕ್ಸಿಟ್ ಪೋಲ್ ಫಲಿತಾಂಶಗಳೆಲ್ಲಾ ತಲೆಕೆಳಗಾಗುತ್ತವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗುತ್ತಿದ್ದು, ಮಹಾರಾಷ್ಟ್ರದ ಚುನಾವಣೋತ್ತರ ಸಮೀಕ್ಷೆ ಕುರಿತು ಬಗ್ಗೆ ಕೇಳಿದಾಗ, ನಾವು ಅಲ್ಲಿಯೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸವಿದೆ. ನನಗೆ ಆ ರಾಜ್ಯದ ಬಗ್ಗೆ ಹೆಚ್ಚು ಸ್ಪಷ್ಟ ಚಿತ್ರಣವಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನು ಕೂಡ ಪ್ರಚಾರಕ್ಕೆ ಹೋಗಿದ್ದೆ, ಆಗ ಕಾಂಗ್ರೆಸ್ ಪರ ಅಲೆ ಕಂಡಿತು. ಆದರೆ ಮತ ಪೆಟ್ಟಿಗೆಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಎಂದರು.
ಜಮೀರಗೆ ಬುದ್ಧಿ ಹೇಳಿದ್ದೇನೆ :
ಕುಮಾರಸ್ವಾಮಿ ಅವರ ಮೈ ಬಣ್ಣದ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಅವರ ಹೇಳಿಕೆ ಕುರಿತು ಪಕ್ಷದೊಳಗೆ ಅಸಮಾಧಾನ ಇರುವ ಬಗ್ಗೆ ಕೇಳಿದಾಗ, ಜಮೀರ್ ಅವರು ಉತ್ತಮ ಕೆಲಸಗಾರ. ಇದು ಪಕ್ಷದ ಆಂತರಿಕ ವಿಚಾರ. ಅವರಿಗೆ ಈ ಬಗ್ಗೆ ಬುದ್ದಿ ಹೇಳಲಾಗಿದೆ. ಅವರು ಆತುರವಾಗಿ ಒಂದಷ್ಟು ಹೇಳಿಕೆ ಕೊಟ್ಟಿದ್ದಾರೆ. ಇದು ತಪ್ಪು ಎಂದು ನಾವು ಹೇಳಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ನಾನೇ ಅವರಿಗೆ ಬುದ್ಧಿ ಹೇಳಿದ್ದೇನೆ. ನನ್ನ ಹೊರತಾಗಿ ಮತ್ತಿನ್ಯಾರು ಅವರಿಗೆ ಬುದ್ಧಿವಾದ ಹೇಳಬೇಕು? ಜಮೀರ್ ಅವರು ಈಗಾಗಲೇ ಅವರ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ ಎಂದರು.
ಸಂಪುಟ ವಿಸ್ತರಣೆ :
ಸಂಪುಟ ವಿಸ್ತರಣೆಯ ಬಗ್ಗೆ ಊಹಾಪೋಹಗಳು ಹರಡಿರುವ ಬಗ್ಗೆ ಪ್ರಶ್ನಿಸಿದಾಗ, ನಾನು ಮುಖ್ಯಮಂತ್ರಿ ಅಲ್ಲ, ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿ. ಅವರು ಇದರ ಬಗ್ಗೆ ಉತ್ತರ ಹೇಳುತ್ತಾರೆ ಎಂದರು. ಸಚಿವ ಮಂಕಾಳು ವೈದ್ಯ, ಅವರ ಜೊತೆ ಇದ್ದರು.