ಕೇರಳ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಇದೀಗ ಮಳೆ ಸಂಬಂಧಿತ ದುರ್ಘಟನೆಯಲ್ಲಿ ಎರಡು ಮಕ್ಕಳು ಸೇರಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಮಲಪ್ಪುರಂ ಜಿಲ್ಲೆಯ ಕರಿಪ್ಪೂರು ಸಮೀಪದ ಪಲ್ಲಿಕಲ್ ಪಂಚಾಯತ್ನಲ್ಲಿ ಸುರಿದ ಮಳೆಯಿಂದಾಗಿ ಮನೆಯ ಒಂದು ಭಾಗ ಕುಸಿದು ಡಯಾನಾ ಫಾತಿಮಾ (7) ಮತ್ತು ಲುಬಾನಾ ಫಾತಿಮಾ (6 ತಿಂಗಳು) ಸಾವನ್ನಪ್ಪಿದ್ದಾರೆ. ಅವರ ಪೋಷಕರು ಮತ್ತು ಕುಟುಂಬದ ಇತರ ಸದಸ್ಯರು ಗಾಯಗೊಂಡಿಲ್ಲ.
ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ, ಭಾರೀ ಮಳೆಯಿಂದಾಗಿ ನೀರು ವೇಗವಾಗಿ ಏರಿದ ಪರಿಣಾಮ ಹೊಳೆಯಲ್ಲಿ ಮುಳುಗಿ ಗೋಮಿಂದರಾಜ್ ಮೃತಪಟ್ಟಿದ್ಧಾರೆ. ಇವರು ನಾಗಮಾಲದಲ್ಲಿ ಎಸ್ಟೇಟ್ ಕಾರ್ಮಿಕರಾಗಿದ್ದರು.
ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣ ಕೇರಳ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಹದಿನಾಲ್ಕು ಜಿಲ್ಲೆಗಳಲ್ಲಿ ಅರೆಂಜ್ ಅಲರ್ಟ್ ಘೋಷಿಸಲಾಗಿದೆ.