ಮಂಗಳೂರು: ಮಣ್ಣು ಸಾಗಿಸುತ್ತಿದ್ದ ಲಾರಿಯೊಂದರ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ಸರಣಿ ಅಪಘಾತವಾದ ಘಟನೆ ಎಡಪದವಿನ ರಾಮಮಂದಿರದ ಬಳಿ ನಡೆದಿದೆ.
ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ಮಣ್ಣು ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿದ್ದು, ಲಾರಿ ನಿಲ್ಲಿಸಲು ಆಗದೇ ಸುಮಾರು 500 ಮೀಟರ್ ದೂರದ ವರೆಗೂ ಚಲಿಸಿದೆ.
ಈ ಸಂದರ್ಭದಲ್ಲಿ ಮೊದಲಿಗೆ ಎದುರು ಸಿಕ್ಕ ಸ್ವಿಫ್ಟ್ ಕಾರೊಂದಕ್ಕೆ ಲಾರಿ ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಅಲ್ಲದೇ ಕಾರಿನಲ್ಲಿದ್ದವರಿಗೆ ಗಾಯವಾಗಿ ಆಸ್ಪತ್ರೆ ದಾಖಲಾಗಿದ್ದರೆಂದು ತಿಳಿದು ಬಂದಿದೆ.
ಬಳಿಕ ಮುಂದೆ ಚಲಿಸಿದ ಲಾರಿ, ಪಿಕ್ಅಪ್ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಬಳಿಕ ಎದುರಿನಿಂದ ಬಂದ ಟ್ಯಾಂಕರ್ ವೊಂದು ಲಾರಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ. ಬಳಿಕ ಎದುರಿನಿಂದ ಬಂದ ಬಸ್ಸಿಗೆ ಢಿಕ್ಕಿ ಹೊಡೆದು ನಿಂತಿದೆ.
ಸರಣಿ ಅಪಘಾತದ ನಡುವೆ ಅಗರಿ ಎಂಟರ್ಪ್ರೈಸಸ್ ಎಂಬ ಅಂಗಡಿಯ ಕಟ್ಟಡಕ್ಕೂ ಹಾನಿಯಾಗಿದೆ