ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಮನ್ಸ್ ಜಾರಿ

ಬೆಳಗಾವಿ, ಮಾರ್ಚ್‌, 29: ಲೋಕಸಭೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಹಿನ್ನೆಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ (ಮಾರ್ಚ್‌ 28) ಐಪಿಸಿ ಕಲಂ 188ರ ಅಡಿ ಸಮನ್ಸ್‌ ಜಾರಿ ಮಾಡಿ ಆದೇಶ ಹೊರಡಿಸಿದೆ.

ಬೆಳಗಾವಿಯ ಕುವೆಂಪು ನಗರದ ತಮ್ಮ ಗೃಹ ಕಚೇರಿ ಸಮೀಪದ ಸಭಾಂಗಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮಾರ್ಚ್ 20ರಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರ ಜೊತೆ ಸಭೆ ನಡೆಸಿದ್ದರು. ಈ ಸಭೆಗೆ ಅನುಮತಿ ಪಡೆದಿರಲಿಲ್ಲ. ಈ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಎದುರಾಗಿತ್ತು.

ಅಷ್ಟೇ ಅಲ್ಲದೇ ತಮ್ಮ ಪುತ್ರ, ಕಾಂಗ್ರೆಸ್​ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಮಾಡುವಂತೆಯೂ ಸಭೆಯಲ್ಲಿ ಹೆಬ್ಬಾಳ್ಕರ್ ಸೂಚಿಸಿದ್ದರು ಎಂಬ ಆರೋಪ ಇದ್ದು, ಇದರ ಬೆನ್ನಲ್ಲೇ ಹೆಬ್ಬಾಳ್ಕರ್ ಅವರಿಗೆ ಸಮನ್ಸ್ ಜಾರಿಯಾಗಿದ್ದು, ಏಪ್ರಿಲ್ 30ರೊಳಗೆ ಉತ್ತರ ನೀಡುವಂತೆ ಸಮನ್ಸ್‌ ಜಾರಿ ಮಾಡಲಾಗಿದೆ. ಎರಡನೇ ಆರೋಪಿಯಾಗಿ ಸಭೆಗೆ ಅವಕಾಶ ಮಾಡಿಕೊಟ್ಟ ಸಭಾಂಗಣದ ಮಾಲೀಕ ಉಮೇಶ ಮಲ್ಲಪ್ಪ ವಾಸಣ್ಣ ಎಂಬವರಿಗೂ ಸಮನ್ಸ್‌ ಜಾರಿ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Latest Indian news

Popular Stories