ಬೆನ್ನಿಗೆ ಚೂರಿ ಹಾಕುವ, ಬೆದರಿಕೆ ಹಾಕುವ ಕೆಲಸ ಮಾಡುವುದಿಲ್ಲ, ಲೋಕಸಭೆ ಚುನಾವಣೆಯಲ್ಲಿ 20 ಸೀಟು ಗೆಲ್ಲುವುದು ನಮ್ಮ ಗುರಿ: ಡಿ ಕೆ ಶಿವಕುಮಾರ್

ಬೆಂಗಳೂರು: ದಕ್ಷಿಣ ಭಾರತದಲ್ಲಿ ಮತ್ತೆ ಕೈ ಮೇಲಾಗಲು ಪ್ರಮುಖ ಕಾರಣಕರ್ತರಾದ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು 135 ಶಾಸಕ ಸ್ಥಾನ ಗೆಲ್ಲಲು ಕೆಪಿಸಿಸಿ ಅಧ್ಯಕ್ಷರಾಗಿ ಶ್ರಮಿಸಿದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಿದ್ದರಾಮಯ್ಯ ಜೊತೆ ತೀವ್ರ ಪೈಪೋಟಿ ನಡೆಸುತ್ತಿರುವ ಡಿ ಕೆ ಶಿವಕುಮಾರ್ ಅವರನ್ನು ಇಂದು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಲು ಹೈಕಮಾಂಡ್ ದೆಹಲಿಗೆ ಬುಲಾವ್ ಮಾಡಿದ್ದು ಅದರಂತೆ ಬೆಂಗಳೂರಿನ ತಮ್ಮ ನಿವಾಸದಿಂದ ದೆಹಲಿಗೆ ಡಿ ಕೆ ಶಿವಕುಮಾರ್ ಹೊರಟಿದ್ದಾರೆ. 

ಕೆಂಪೇಗೌಡ ಏರ್ ಪೋರ್ಟ್ ಗೆ ಹೋಗುವ ವೇಳೆ ಎಎನ್ ಐ ಸುದ್ದಿಸಂಸ್ಥೆಯ ಪ್ರತಿನಿಧಿಯೊಂದಿಗೆ ವಿಶೇಷವಾಗಿ ಮಾತನಾಡಿದ ಅವರು, ಪಕ್ಷ ಬಯಸಿದರೆ ನನಗೆ ಜವಾಬ್ದಾರಿ ನೀಡಬಹುದು. ನಮ್ಮದು ಒಂದು ಒಗ್ಗಟ್ಟಿನ ಮನೆ. 135 ಶಾಸಕರ ಬಲವಿದೆ. ಯಾರನ್ನೂ ವಿಭಜಿಸಲು ಒಡೆಯಲು ನನಗೆ ಮನಸ್ಸಿಲ್ಲ. ಹೈಕಮಾಂಡ್ ನನ್ನನ್ನು ಬಯಸುತ್ತದೋ ಇಲ್ಲವೋ ನನ್ನ ಜವಾಬ್ದಾರಿಯನ್ನು ನಾನು ಮಾಡುತ್ತೇನೆ. ಬೆನ್ನಿಗೆ ಚೂರಿ ಹಾಕುವ ಬೆದರಿಕೆ ಹಾಕುವ ಕೆಲಸ ಮಾಡುವುದಿಲ್ಲ, ಮುಂದಿನ ಲೋಕಸಭೆ ಚುನಾವಣೆಯಲ್ಲಿ 20 ಸೀಟು ಗೆಲ್ಲುವುದು ನನ್ನ ಗುರಿ ಎಂದರು.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಈ ಬಾರಿ 135 ಸೀಟುಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷ ನನಗೆ ದೇವರಿದ್ದಂತೆ, ನಾವು ಪಕ್ಷವನ್ನು ಕಟ್ಟಿದ್ದೇವೆ. ನಾನು ಅದರ ಭಾಗವಾಗಿದ್ದೇನೆ, ಒಬ್ಬ ತಾಯಿ ತನ್ನ ಮಗುವಿಗೆ ಎಲ್ಲವನ್ನೂ ನೀಡುತ್ತಾಳೆ ಎಂದರು.

ಪಕ್ಷದ ಅಧ್ಯಕ್ಷರಾಗಿ ನಿಮ್ಮ ನಿರೀಕ್ಷೆಗಳೇನು ಎಂದು ಕೇಳಿದಾಗ, ಈ ಹಿಂದೆ ಏನು ನಡೆದಿತ್ತು ಎಂದು ಮಾತನಾಡಲು ನಾನು ಇಷ್ಟಪಡುವುದಿಲ್ಲ. ಅದು ಹೇಗಾಯಿತು, ನಾವು ಸರ್ಕಾರ ರಚಿಸಿದ್ದು, ನಂತರ ಸರ್ಕಾರ ಬಿದ್ದು ಹೋಗಿದ್ದು ಎಲ್ಲವೂ ಈಗ ಮುಗಿದ ಅಧ್ಯಾಯ. ಸಮ್ಮಿಶ್ರ ಸರ್ಕಾರ ರಚಿಸಿ ನಂತರ ಮುರಿದು ಬಿತ್ತು. ಸೋಲು-ಗೆಲುವಿಗೆ ಯಾರು ಜವಾಬ್ದಾರರು ಎಂಬುದನ್ನು ಈಗ ಮಾತನಾಡಿ ಯಾವ ಪ್ರಯೋಜನವೂ ಇಲ್ಲ. ಹಿಂದಿನದನ್ನು ಮಾತನಾಡುವುದು, ಕೆದಕುವುದು ಬೇಡ, ಭವಿಷ್ಯದ ಬಗ್ಗೆ ಯೋಚಿಸೋಣ ಎಂದರು.

ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ನಿನ್ನೆ ಎಐಸಿಸಿ ನಾಯಕರನ್ನು ದೆಹಲಿಯ ಲೋಧಿ ಹೊಟೇಲ್ ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

Latest Indian news

Popular Stories