ನಟ ವಿಜಯ್ ಸೇತುಪತಿ ಅವರು ಬೆಂಗಳೂರಿನ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಬರುವ ಪ್ಲ್ಯಾನ್ನಲ್ಲಿದ್ದರು. ತಮಿಳುನಾಡಿನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಜಯ್ ಸೇತುಪತಿ ಬಂದಿಳಿದ ನಂತರದಲ್ಲಿ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆಗೆ (ನ.2) ಈ ಘಟನೆ ನಡೆದಿದೆ.
ವಿಜಯ್ ಸೇತುಪತಿ ಜೊತೆಗೆ ಬರುತ್ತಿದ್ದ ಸಹ ಪ್ರಯಾಣಿಕ ಕುಡಿದ ಅಮಲಿನಲ್ಲಿ ವಿಮಾನದಲ್ಲಿಯೇ ಅವರ ಪಿಎ ಜೊತೆಗೆ ಒಂದಷ್ಟು ಗಲಾಟೆ ಮಾಡಿಕೊಂಡಿದ್ದರು. ಆ ವೇಳೆ ವಿಜಯ್ ಸೇತುಪತಿ ಅವರಿಬ್ಬರ ಗಲಾಟೆಯನ್ನು ಬಿಡಿಸಲು ಹೋಗಿ ಮಾತಿನ ಚಕಮಕಿ ನಡೆದಿತ್ತು. ಇನ್ನು ವಿಜಯ್ ಸೇತುಪತಿ ಅವರು ವಿಮಾನದಿಂದ ಇಳಿದು ಹೋಗುತ್ತಿರುವಾಗ ಆ ಸಹ ಪ್ರಯಾಣಿಕ ಏಕಾಏಕಿ ವಿಜಯ್ ಮೇಲೆ ಹಲ್ಲೆ ಮಾಡಿದ್ದಾನೆ. ಆ ವಿಡಿಯೋ ವೈರಲ್ ಆಗಿದೆ.
ಹಲ್ಲೆ ನಡೆದಾಗ ಏರ್ಪೋರ್ಟ್ನಲ್ಲಿದ್ದ ಸಿಬ್ಬಂದಿಗಳು ಗಲಾಟೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ, ಸಹ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ಆನಂತರದಲ್ಲಿ ವಿಜಯ್ ಸೇತುಪತಿ ದೂರು ನೀಡಲು ಮುಂದಾಗಿದ್ದಾರೆ. ವಿಜಯ್ ಸೇತುಪತಿ & ಸಹಪ್ರಯಾಣಿಕರ ಮಧ್ಯೆ ರಾಜಿ ಸಂಧಾನ ಆಗಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹಲ್ಲೆ ಮಾಡಿದವರು ತಮಿಳುನಾಡಿನ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.