ನವದೆಹಲಿ: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಹಲವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇರಾನ್ ಸತತವಾಗಿ ದಾಳಿ ನಡೆಸುತ್ತಿದೆ. ಈ ದಾಳಿಗೂ ಮೊದಲು ಇಸ್ರೇಲ್ ಮೂಲದ ಹಡಗಿನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿತ್ತು. ಈ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಗಳು ಸಿಲುಕಿದ್ದರು.
ಇರಾನ್ ಸೇನೆ ವಶಪಡಿಸಿಕೊಂಡಿದ್ದ ಇಸ್ರೇಲ್ ಜೊತೆ ನಂಟಿರುವ ನೌಕೆ ‘ಎಂಎಸ್ಸಿ ಏರೀಸ್’ನಲ್ಲಿದ್ದ 17 ಜನ ಭಾರತೀಯರ ಪೈಕಿ ಏಕೈಕ ಮಹಿಳಾ ಸಿಬ್ಬಂದಿಯಾದ ಆ್ಯನ್ ಟೆಸ್ಸಾ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅವರು ತಾಯ್ನಾಡಿಗೆ ಗುರುವಾರ ವಾಪಸಾಗಿದ್ದಾರೆ.
ಇದು, ಇರಾನ್ನಲ್ಲಿರುವ ಭಾರತದ ರಾಯಭಾರ ಕಚೇರಿ ನಡೆಸಿದ ಸತತ ಪ್ರಯತ್ನಗಳಿಗೆ ಸಿಕ್ಕ ಜಯವಾಗಿದೆ. ಕೇರಳದ ತ್ರಿಶ್ಶೂರಿನವರಾದ ಜೋಸೆಫ್ ಅವರು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ ಬಂದಿಳಿದರು. ಅವರನ್ನು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಅಧಿಕಾರಿಯೊಬ್ಬರು ಬರಮಾಡಿಕೊಂಡರು.
ಈ ನೌಕೆಯನ್ನು ಏಪ್ರಿಲ್ 13ರಂದು ಇರಾನ್ನ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ, ನೌಕೆಯಲ್ಲಿದ್ದ ಭಾರತೀಯರ ಸುರಕ್ಷಿತ ಬಿಡುಗಡೆಗೆ ಟೆಹರಾನ್ನಲ್ಲಿರುವ ರಾಯಭಾರ ಕಚೇರಿಯು ಇರಾನ್ ಸರ್ಕಾರದೊಂದಿಗೆ ಸತತ ಮಾತುಕತೆ ನಡೆಸಿತ್ತು.
ಇರಾನ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಭಾರತ ವಿದೇಶಾಂಗ ಇಲಾಖೆ ಭಾರತೀಯರ ಸುರಕ್ಷಿತ ಬಿಡುಗಡೆ ಒತ್ತಾಯಿಸಿತ್ತು. ಖುದ್ದು ಕೇಂದ್ರ ಸಚಿವ ಜೈಶಂಕರ್ ಸಹ ಇರಾನ್ ಜತೆ ಮಾತುಕತೆ ನಡೆಸಿ ಭಾರತೀಯರನ್ನು ಬಿಟ್ಟು ಕಳುಹಿಸುವಂತೆ ಮನವಿ ಮಾಡಿದ್ದು, ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿತ್ತು.
ಇದರ ಪರಿಣಾಮ ಇರಾನ್, ಭಾರತೀಯ ಮಹಿಳಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದೆ. ಸದ್ಯ, ಆ್ಯನ್ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಗಿದೆ. ಉಳಿದವರ ಬಿಡುಗಡೆಗಾಗಿ ಇರಾನ್ ಸರ್ಕಾರದ ಜೊತೆ ಮಾತುಕತೆ ಮುಂದುವರಿದಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.