ಸಾಮಾಜಿಕ, ಆರ್ಥಿಕ ಜಾತಿಗಣತಿ ವರದಿಯನ್ನು ಕುಮಾರಸ್ವಾಮಿ ಒಪ್ಪಿರಲಿಲ್ಲ: ನಾವು ಸ್ವೀಕರಿಸುತ್ತೇವೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2018-19ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವೇಳೆಯಲ್ಲಿಯೇ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ವರದಿ ಸಿದ್ಧವಾಗಿದ್ದರೂ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಅದನ್ನು ಒಪ್ಪಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ವಿಧಾನಸಭೆಯ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಅವರು ನೀಡಿದ ಹೇಳಿಕೆ ರಾಜಕೀಯ ಕೆಸರೆರಚಾಟ ಉಂಟುಮಾಡುವ ಸಾಧ್ಯತೆಯಿದೆ. ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿಯನ್ನು ಸಿದ್ಧಪಡಿಸಿದ್ದರೂ, ಕಡ್ಡಾಯವಾಗಿರುವ ಸದಸ್ಯ ಕಾರ್ಯದರ್ಶಿಯಿಂದ ಸಹಿ ಮಾಡಿಲ್ಲ ಎಂಬುದು ಅಧಿಕೃತವಾಗಿ ಕೇಳಿಬಂದಿತ್ತು. 

2018ರಲ್ಲಿ ಮೈತ್ರಿ ಸರ್ಕಾರ ರಚನೆಯಾಯಿತು. ವರದಿ ಅಂಗೀಕರಿಸುವಂತೆ ಅಂದಿನ ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗ ಶೆಟ್ಟಿಯವರಿಗೆ ಹೇಳಿದ್ದೆ ಮತ್ತು ಅವರು ಸಿದ್ಧರಿದ್ದರು, ಆದರೆ ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅದನ್ನು ಮಾಡಬಾರದು ಎಂದು ಶೆಟ್ಟಿ ಅವರಿಗೆ ಒತ್ತಡ ಹೇರಿದ್ದರು ಎಂದು ಸಿಎಂ ತಿಳಿಸಿದರು. 

ಬೆಂಗಳೂರು ದಕ್ಷಿಣ ತಾಲೂಕಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ,  ಸದಸ್ಯ ಕಾರ್ಯದರ್ಶಿಗಳು ಸಹಿ ಮಾಡದ ಕಾರಣ ಎಲ್ಲ ಕಾನೂನು ತೊಡಕುಗಳು ಬಗೆಹರಿದ ನಂತರ ಈ ಬಾರಿ ತಮ್ಮ ಸರ್ಕಾರ ಖಂಡಿತವಾಗಿಯೂ ವರದಿಯನ್ನು ಒಪ್ಪಿಕೊಳ್ಳುತ್ತದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಆಯೋಗದ ಈಗಿನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು.

ಈಶ್ವರಪ್ಪ ಅವರನ್ನು ಸನ್ಮಾನಿಸಲು ನಿರಾಕರಿಸಿದ ಸಿದ್ದರಾಮಯ್ಯ:  ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಅವರ ಎದುರಾಳಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವೇದಿಕೆಯಲ್ಲಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಸನ್ಮಾನಿಸಲು ನಿರಾಕರಿಸಿದರು. ಈಶ್ವರಪ್ಪ ಅವರಿಗೆ ಶಾಲು ಹೊದಿಸಿ ಸನ್ಮಾನಿಸುವಂತೆ ನಿರಂಜನಾನಂದಪುರಿ ಸ್ವಾಮಿ ಸಿದ್ದರಾಮಯ್ಯಗೆ ಕೋರಿದರು. ಆದರೆ ಇದಕ್ಕೆ ಸಿದ್ದರಾಮಯ್ಯ ಸಾರಾಸಗಟಾಗಿ ನಿರಾಕರಿಸಿದ್ದು, ಬಳಿಕ ಸ್ವಾಮೀಜಿ ವಿಧಿವತ್ತಾಗಿ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Latest Indian news

Popular Stories