ಕಾರವಾರ: ಹತ್ತು ವರ್ಷಗಳ ಆಡಳಿತದಲ್ಲಿ ಚುನಾವಣಾ ಪ್ರಚಾರಕ್ಕೆ ಮಾತ್ರ ಆಗಮಿಸುವ ಪ್ರಧಾನಿ ಮೋದಿಗೆ ಉತ್ತರಕನ್ನಡದಲ್ಲಿ #GoBackModi ( ಗೋ ಬ್ಯಾಕ್ ಮೋದಿ) ಅಭಿಯಾನದ ಬಿಸಿ ತಾಗಿತು .
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಆಗಮಿಸುವ ವೇಳೆಗೆ ಟ್ವಿಟರ್ ಅಭಿಯಾನ ರವಿವಾರ ಬೆಳಿಗ್ಗೆ ಶುರುವಾಗಿತ್ತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಬಂದಾಗ, ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಹಾಗೂ ಮುಸ್ಲಿಮರ ಬಗ್ಗೆ ನಾಲಿಗೆ ಹರಿಬಿಟ್ಟಾಗ, ಅರಣ್ಯ ಅತಿಕ್ರಮಣ ಹಕ್ಕು, ಸುಸಜ್ಜಿತ ಆಸ್ಪತ್ರೆ ಬಗ್ಗೆ ಎಲ್ಲಿಯೂ ಈವರೆಗೆ ಮಾತನಾಡದ ಪ್ರಧಾನಿ ಮೋದಿ, ಇಂದು ಚುನಾವಣಾ ಪ್ರಚಾರಕ್ಕೆಂದು ಶಿರಸಿಗೆ ಆಗಮಿಸುತ್ತಿರುವುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಉತ್ತರಕನ್ನಡದಿಂದ #GoBackModi ಹ್ಯಾಷ್ಟ್ಯಾಗ್ ರವಿವಾರ ಬೆಳಿಗ್ಗೆ 11ರಿಂದ ಟ್ವಿಟರ್ನಲ್ಲಿ ಸದ್ದು ಮಾಡಿದೆ. ಉತ್ತರಕನ್ನಡಕ್ಕೆ ಸೇರಿದ ಸುಮಾರು 20ಕ್ಕೂ ಅಧಿಕ ಅಂಶಗಳನ್ನಿಟ್ಟುಕೊಂಡು ಟ್ವೀಟ್ ಮಾಡಲಾಗುತ್ತಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿ ಶಾಸಕರುಗಳ ಪರ ಪ್ರಚಾರಕ್ಕೆ ಕಾರವಾರಕ್ಕೆ ಬಂದಿದ್ದು ಬಿಟ್ಟರೆ ಮೋದಿಯವರು ಈಗ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆಂದೇ ಶಿರಸಿಗೆ ಬಂದಿದ್ದಾರೆ. ಜನರ ಸಂಕಷ್ಟಗಳಿಗೆ ದನಿಯಾಗದ ಮೋದಿ, ಕೇವಲ ಚುನಾವಣಾ ಪ್ರಚಾರಕ್ಕೆ ಬರುವ ಪ್ರಧಾನಿಯಾದಂತಾಗಿದೆ ಎಂದು ಟ್ವಿಟ್ ಮಾಡಲಾಗಿತ್ತು.
…..