ಜಯಪ್ರಕಾಶ್‌ ಹೆಗ್ಡೆ ಅವರು ಬಹುಮತದಿಂದ ಆಯ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ – ಸುಧೀರ್‌ ಕುಮಾರ್‌ ಮುರೊಳ್ಳಿ

ಕಾರ್ಕಳದಲ್ಲಿ ಬಿಜೆಪಿಯ ಮೋಸದ ರಾಜಕೀಯ ಕೊನೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಯಿಂದ ಕಾರ್ಕಳದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಲೀಡ್‌ ಬರಲಿದೆ.

ಸಮರ್ಥ ಸಂಸದೀಯ ಪಟು ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ ಎಂದು ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ ಹೇಳಿದರು.

ಶುಕ್ರವಾರ ಉಡುಪಿ – ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರ ಪರವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಕಾರ್ಕಳ ಬೈಪಾಸ್‌ನಿಂದ ಹೆಬ್ರಿ ತನಕ ಬೃಹತ್‌ ವಾಹನ ಜಾಥಾದಲ್ಲಿ ಅವರು ಭಾಗವಹಿಸಿದ ಬಳಿಕ ಹೆಬ್ರಿ ಬಸ್‌ ಸ್ಟಾಂಡ್‌ ವಠಾರದಲ್ಲಿ ನಡೆದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಶೆಟ್ಟಿ ಮಾತನಾಡಿ, ಕಳೆದ ಬಾರಿಯ ಚುನಾವಣೆಯಲ್ಲಿ ಕಾರ್ಕಳದ ಜನತೆ ಉತ್ತಮ ಮತ ನೀಡಿದ್ದೀರಿ. ಆದರೆ ಬಿಜೆಪಿಯ ಅಪಪ್ರಚಾರದಿಂದ ಕೆಲವು ಮತಗಳ ಅಂತರದಿಂದ ಸೋತರೂ ನಾವು ಗೆದ್ದಿದ್ದೇವೆ. ಬಿಜೆಪಿಗರ ಸುಳ್ಳು ಈಗ ಜನರಿಗೆ ಅರಿವಾಗಿದೆ ಎಂದರು.

ಇವತ್ತಿನ ಜಾಥಾದಿಂದ ಜನ ಸ್ಪಷ್ಟ ಸಂದೇಶ ನೀಡಿದ್ದಾರೆ. ಸಮರ್ಥ ನಾಯಕ ಜಯಪ್ರಕಾಶ್‌ ಹೆಗ್ಡೆ ಅವರು ಬಹುಮತದಿಂದ ಆಯ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆ ಜನರ ಕೈ ಹಿಡಿದಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಕಾರ್ಯಕರ್ತ ರಿಂದ ಆಗಬೇಕು ಎಂದರು.

ಅಭಿವೃದ್ಧಿ ಕೆಲಸಕ್ಕೆ ಮತ ನೀಡಿ
ಜನರ ಬೆಂಬಲ ನೋಡುವಾಗ ನಾನು ಮಾಡಿದ ಅಭಿವೃದ್ಧಿ ಕೆಲಸಕ್ಕೆ ಜನ ಮತ ನೀಡುತ್ತಾರೆ ಎಂಬ ಭರವಸೆ ಇದೆ. ಬಿಜೆಪಿ ಯವರ ಅಪಪ್ರಚಾರಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ. ಜನ ಅದಕ್ಕೆ ತಕ್ಕ ಉತ್ತರವನ್ನು ಮತದಾನದ ಮೂಲಕ ನೀಡಲಿದ್ದಾರೆ ಎಂದು ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಹೇಳಿದರು.

ಮತದಾರರ ಪಾಲಿನ ಗ್ಯಾರಂಟಿ ಪಕ್ಷ ಕಾಂಗ್ರೆಸ್‌
ಕಾಂಗ್ರೆಸ್‌ ಪಕ್ಷ ಕೊಟ್ಟ ಆಶ್ವಾಸನೆಗಳನ್ನು ಉಳಿಸಿಕೊಂಡು ಬಂದು, ಇಂದು ಬಡವರ ಪಕ್ಷವಾಗಿ ಮತದಾರರ ಗ್ಯಾರಂಟಿ ಪಕ್ಷವಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್‌ಸೊರಕೆ ಹೇಳಿದರು.

ಬೃಹತ್‌ ವಾಹನ ಜಾಥಾ
ಕಾರ್ಕಳ ಬೈಪಾಸ್‌ನಿಂದ ಹೆಬ್ರಿ ತನಕ ಸಾವಿರಾರು ಜನರೊಂದಿಗೆ ಸುಮಾರು 500ಕ್ಕೂ ಮಿಕ್ಕಿ ವಾಹನಗಳ ಬೃಹತ್‌ ಜಾಥಾಕ್ಕೆ ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಚಾಲನೆ ನೀಡಿದರು.

ಕಾರ್ಕಳದಿಂದ ಹೆಬ್ರಿ ತನಕ ನಮ್ಮ ಎಂಪಿ ನಮ್ಮ ಜೆಪಿ ಎಂಬ ಕೂಗು ಕಾರ್ಯಕರ್ತರಲ್ಲಿ ಕೇಳಿಬರುತ್ತಿತ್ತು. ಹೆಬ್ರಿ ಕಾರ್ಕಳ ಭಾಗದ ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಬಾಯಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್‌, ಪ್ರಮುಖರಾದ ನೀರೆ ಕೃಷ್ಣ ಶೆಟ್ಟಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಸುರೇಂದ್ರ ಶೆಟ್ಟಿ, ಸದಾಶಿವ ದೇವಾಡಿಗ, ಶೇಖರ್‌ ಮಡಿವಾಳ, ದಿನೇಶ್‌ ಶೆಟ್ಟಿ, ದೀಪಾ ಭಂಡಾರಿ, ರಂಜನಿ ಹೆಬ್ಬಾರ್‌ ಮೊದಲಾದವರು ಉಪಸ್ಥಿತರಿದ್ದರು. ನಿತೀಶ್‌ ಎಸ್‌. ಪಿ. ಕಾರ್ಯಕ್ರಮ ನಿರೂಪಿಸಿದರು.

Latest Indian news

Popular Stories