ತಂಬಾಕು ನಿಯಂತ್ರಣ ತನಿಖಾ ತಂಡದಿಂದ ದಾಳಿ: 16 ಪ್ರಕರಣ ದಾಖಲು

ಬಳ್ಳಾರಿ,ಜು07(ಕನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ, ಪೋಲಿಸ್, ಕಾರ್ಮಿಕ ಇಲಾಖೆ, ಪಟ್ಟಣ ಪಂಚಾಯತ್ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡದ ಅಧಿಕಾರಿಗಳಿಂದ ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಯಿತು.
ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಾಮಫಲಕ ಅಳವಡಿಸದ ಹೋಟೆಲ್, ಪಾನ್‍ಶಾಪ್, ಇತ್ಯಾದಿ ಅಂಗಡಿಗಳ ಮೇಲೆ ದಾಳಿ ನಡೆಸಿ, 16 ಪ್ರಕರಣಗಳಲ್ಲಿ 2100 ರೂ. ಸಂಗ್ರಹಿಸಲಾಗಿದೆ ಎಂದು ತೆಕ್ಕಲಕೋಟೆ ಪೋಲಿಸ್ ಸಬ್ ಇನ್ಸ್‍ಪೆಕ್ಟರ್ ಶಿವಕುಮಾರ್ ನಾಯ್ಕ ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ದುರುಗೇಶ. ಎಸ್. ಮಾಚನೂರು ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಈ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಪ್ರದೇಶಗಳನ್ನು ‘ಧೂಮಪಾನ ಮುಕ್ತ ನಗರ’ ಗಳೆಂದು ಘೋಷಿಸುವ ಸಲುವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಕೈಗೊಂಡ ಕಾರ್ಯಾಚರಣೆಯಲ್ಲಿ ಸೆಕ್ಷನ್ 4 ಮತ್ತು 6ಎ ನಾಮಫಲಕ ಅಳವಡಿಸದ ಪ್ರಮುಖ ಸಾರ್ವಜನಿಕ ಸ್ಥಳಗಳ ಮೇಲೆ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಸೆಕ್ಷನ್ 4, 6ಎ ಮತ್ತು 6ಬಿ ರ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು.
ಕಾರ್ಯಚರಣೆಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಲಹೆಗಾರರಾದ ದುರುಗೇಶ ಎಸ್.ಮಾಚನೂರು ಅವರು ಕಾನೂನಿನ ನಿಯಮಗಳನ್ನು ಉಲ್ಲಂಘಿಸದೆ ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಂಬಂಧಪಟ್ಟ ಮಾಲೀಕರು ನಾಮಫಲಕ ಅಳವಡಿಸಿ ಬಳ್ಳಾರಿ ಜಿಲ್ಲೆಯನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡಲು ಸಹಕರಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ನಿರ್ದೇಶಕರಾದ ಎ.ಮೌನೇಶ್, ಕಾರ್ಮಿಕ ನಿರೀಕ್ಷಕರಾದ ರಾಜೇಶ್, ಪಟ್ಟಣ ಪಂಚಾಯಿತಿಯ ಆರೋಗ್ಯ ನಿರೀಕ್ಷಕರಾದ ಶೋಭಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತರಾದ ಭೋಜರಾಜ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಮತ್ತು ಇತರರು ಇದ್ದರು.

Latest Indian news

Popular Stories