ಕೋವಿಡ್ ಸೋಕಿತರ ಸಂಪರ್ಕಿತರನ್ನು ಗುರುತಿಸುವಲ್ಲಿ ಪಾಲಿಕೆಯೊಂದಿಗೆ ಕೈಜೋಡಿಸಿ: ಪ್ರೀತಿ ಗೆಹ್ಲೋಟ್

ಬಳ್ಳಾರಿ,ಮೇ20(ಕರ್ನಾಟಕ ವಾರ್ತೆ):ನಗರದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಸೋಂಕಿತರ ಸಂಪರ್ಕಿತರನ್ನು ಗುರುತಿಸುವುದು ಕಷ್ಟವಾಗುತ್ತಿದೆ;ನಿಮ್ಮ ನಿಮ್ಮ ವಾರ್ಡ್‍ಗಳಲ್ಲಿ ಪತ್ತೆಯಾಗುವ ಪ್ರಕರಣಗಳ ಸೋಂಕಿತರ ಸಂಪರ್ಕಿತರ ಬಗ್ಗೆ ಮಾಹಿತಿ ನೀಡಿ ಕೋವಿಡ್ ಸರಪಳಿಯನ್ನು ತುಂಡರಿಸಲು ನೆರವಾಗಿ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೊಸದಾಗಿ ಆಯ್ಕೆಯಾದ ಮಹಾನಗರ ಪಾಲಿಕೆ 39 ವಾರ್ಡ್‍ಗಳ ಸದಸ್ಯರೊಂದಿಗೆ ಗುರುವಾರ ನಡೆದ ಕೋವಿಡ್ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆಯಿರಿ,ಲಸಿಕೆ ಪಡೆಯಲು ಯಾವುದೇ ಭಯಬೇಡ. ಜನರಲ್ಲಿ ಲಸಿಕೆ ಕುರಿತು ಇರುವ ಭಯವನ್ನು ಹೋಗಲಾಡಿಸಿ, ಲಸಿಕೆ ಪಡೆದುಕೊಳ್ಳುವಂತೆ ಹೇಳಿ. ಕೋವಿಡ್ ಸಂಪರ್ಕಿತರನ್ನು ಗುರುತಿಸುವ ಮೂಲಕ ಜಿಲ್ಲೆಯಲ್ಲಿ ಕೊರಾನಾ ಹರಡುವಿಕೆಯನ್ನು ಕಡಿಮೆ ಮಾಡಬಹುದು. ನಗರದಲ್ಲಿ ಮರಣ ಪ್ರಮಾಣ ಕಡಿಮೆ ಮಾಡಿ; ಜನರ ಜೀವ ಉಳಿಸಲು ಮಹಾನಗರ ಪಾಲಿಕೆಯೊಂದಿಗೆ ಎಲ್ಲ ಸದಸ್ಯರು ಕೈಜೋಡಿಸಿ ಎಂದರು.
ಎಲ್ಲಾ 39 ವಾರ್ಡ್‍ಗಳಲ್ಲಿ ಸದಸ್ಯರನ್ನು ಒಳಗೊಂಡಂತೆ ಒಂದು ತಂಡವನ್ನು ರಚಿಸಲಾಗುವುದು ಅದರ ಮುಖಾಂತರ ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕೋವಿಡ್ ಪ್ರಕರಣಗಳು ಮತ್ತು ಸಂಪರ್ಕಿತರ ಮಾಹಿತಿ ನೀಡುವ ಕೆಲಸ ನಿರ್ವಹಿಸಿ ಎಂದು ಹೇಳಿದ ಅವರು ಕೋವಿಡ್ ನಿಯಂತ್ರಣ ಬಗ್ಗೆ ಇದುವರೆಗೆ ಮಹಾನಗರ ಪಾಲಿಕೆಯಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.
ಎಲ್ಲಾ ಸದಸ್ಯರು ಜನರಲ್ಲಿರುವ ಭಯ ದೂರ ಮಾಡಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿ, ಲಕ್ಷಣಗಳು ತೀವ್ರವಾಗಿ ಕಂಡು ಬಂದಲ್ಲಿ ಅವರನ್ನು ಹೋಂ ಐಸೋಲೇಷನ್ ನಲ್ಲಿ ಇರುವಂತೆ ಹೇಳಿ, ಹೆಚ್ಚಿನ ಪರಿಣಾಮಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎಂದು ತಿಳಿಸಿದರು.
ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ ಅವರು ಮಾತನಾಡಿ ಕೋವಿಡ್ ಲಸಿಕೆ ಪಡೆದವರಲ್ಲಿ ಕೊರೊನಾ ಲಕ್ಷಣಗಳು ಕಂಡು ಬರುವುದು ಕಡಿಮೆಯಿದೆ. ಜಿಲ್ಲೆಯಲ್ಲಿ ಲಸಿಕೆ ಪಡೆದವರ ಮರಣವೂ ದಾಖಲಾಗಿಲ್ಲ;ಹೀಗಾಗಿ ಎಲ್ಲರೂ ಕೋವಿಡ್ ಲಸಿಕೆ ಪಡೆಯಿರಿ ಎಂದು ಹೇಳಿದರು.
ಜಿಲ್ಲಾಡಳಿತದಿಂದ ನಗರದಾದ್ಯಂತ ಉಚಿತವಾಗಿ ಶವಸಾಗಾಣಿಕೆಗೆ ಅವಕಾಶ ನೀಡಲಾಗಿದೆ. ಇದಕ್ಕೆ ಯಾವುದೇ ರೀತಿಯ ಹಣಕೊಡುವ ಹಾಗಿಲ್ಲ. ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ಮನೆಗೆ ಕರೆದುಕೊಂಡು ಹೋಗದೆ ನೇರವಾಗಿ ರುದ್ರಭೂಮಿಗೆ ತೆಗೆದುಕೊಂಡು ಹೋಗಲು ಅವಕಾಶವಿದ್ದು ಇದರ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಮಾಹಿತಿ ನೀಡಿ ಎಂದರು.
ಕೊವಿಡ್ ಮೊದಲನೇ ಅಲೆಗೂ ಎರಡನೇ ಅಲೆಗೂ ತುಂಬಾ ವ್ಯತ್ಯಾಸವಿದೆ. ಲಕ್ಷಣಗಳ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ, ಪಾಸಿಟಿವ್ ಬಂದರೆ ವೈದ್ಯರ ನಿರ್ದೇಶನದಂತೆ ಔಷಧಿ ಪಡೆದು ಮಾರ್ಗದರ್ಶನ ಪಾಲಿಸಿ. ಪಾಸಿಟಿವ್ ಬಂದು ಹೊರಗಡೆ ಓಡಾಡುತ್ತಿರುವುದು ಕಂಡುಬರುತ್ತಿದೆ. ಇದರ ಕುರಿತು ನಿಮ್ಮ ನಿಮ್ಮ ವಾರ್ಡ್‍ಗಳ ಮಾಹಿತಿ ನೀಡಿ, ನೀವು ಅವರಿಗೆ ತಿಳಿಹೇಳುವ ಕೆಲಸ ಮಾಡಿ ನಿಮ್ಮ ಮಾತು ಕೇಳುತ್ತಾರೆ ಎಂದು ಅವರು ಹೇಳಿದರು.
ಈ ಸಮಯದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ,ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories