ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಮಾಪ್ತರಾರೂ ಯಡಿಯೂರಪ್ಪನವರ ಸಾಮೀಪ್ಯದಲ್ಲಿಲ್ಲ. ಹಿಂದೆ ಗಟ್ಟಿ ನಿರ್ಧಾರ ಕೈಗೊಂಡ ವೇಳೆ ಸಿಕ್ಕ ಬೆಂಬಲ ಈಗ ಕಾಣದಿರುವುದು ಯಡಿಯೂರಪ್ಪನವರ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಮಾತನಾಡಲೂ ಆಗದೆ, ಮೌನವಾಗಿ ಇರಲೂ ಆಗದೆ ಚಡಪಡಿಸುತ್ತಾ ಕೂರುವಂತಾಗಿದೆ.
ಈ ಹಿಂದೆ 2011 ರ ಜುಲೈ 31 ರಂದು ಹೈಕಮಾಂಡ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದರು. ರೇಸ್ ಕೋರ್ಸ್ ನಿವಾಸದಿಂದ ಸಂಪುಟ ಸಹೋದ್ಯೋಗಿಗಳು ಮತ್ತು ಶಾಸಕರ ತಂಡದೊAದಿಗೆ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು.
ಇದೀಗ ರಾಜೀನಾಮೆ ಕಾಲ ಸನ್ನಿಹಿತವಾದರೂ ಆಪ್ತರ ಬಳಿಯೂ ಯಡಿಯೂರಪ್ಪ ರಾಜಕೀಯ ನಿರ್ಧಾರಗಳ ಕುರಿತು ಸ್ಪಷ್ಟವಾಗಿ ಏನನ್ನೂ ಮಾತನಾಡುತ್ತಿಲ್ಲ. ಗಟ್ಟಿ ನಿರ್ಧಾರಕ್ಕೆ ಮುಂದಾಗದೆ ಅಸಮಾಧಾನ ವ್ಯಕ್ತಪಡಿಸದೆ ಮೌನವಾಗಿಬಿಟ್ಟಿದ್ದಾರೆ.