ಮಡಿಕೇರಿ ಮೇ ೩ : ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.೩೩.೩೪ಕ್ಕೇ ಏರಿದ್ದು, ದೇಶದಲ್ಲಿಯೇ ಕೊಡಗು ಪಾಸಿಟಿವಿಟಿ ರೇಟ್ನಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿದೆ. ಇನ್ನು ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಶೇ.೧.೧ಕ್ಕೆ ತಲುಪಿದ್ದು ಸಾರ್ವಜನಿಕರು ಜಾಗೃತರಾಗದಿದ್ದರೆ ಪರಿಸ್ಥಿತಿ ಕೈ ತಪ್ಪಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಜಿಲ್ಲಾ ಪಂಚಾಯಿತಿ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಬಗ್ಗೆ ಅಪ್ಪಚ್ಚು ರಂಜನ್ ಮಾಹಿತಿ ನೀಡಿದರು. ಮಾತ್ರವಲ್ಲದೇ, ಕೊಡಗು ಜಿಲ್ಲಾಡಳಿತ ಕೆಲವು ಕಠಿಣ ನಿಯಮಗಳನ್ನು ಇಂದಿನಿAದಲೇ ಜಾರಿಗೆ ತೆರಬೇಕಿದ್ದು, ಸರಕಾರ ಕೂಡ ಸೂಕ್ತವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್ ಕೊಡಗು ಜಿಲ್ಲೆಯಲ್ಲಿ ಕೋವಿಡ್ ೨ ನೇ ಅಲೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ. ಕೊಡಗು ಜಿಲ್ಲೆ ಕೋವಿಡ್ ಪಾಸಿಟಿವಿಟಿಯಲ್ಲಿ ಶೇ.೩೩.೩೪ ರಷ್ಟಿದ್ದು, ಇದು ತಲೆ ತಗ್ಗಿಸುವ ವಿಚಾರವಾಗಿದೆ. ಮಾತ್ರವಲ್ಲದೇ, ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ.೧.೧ ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸಲು ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕಿದ್ದು, ಸಾರ್ವಜನಿಕರು ಎಲ್ಲಾ ಸಹಕಾರ ನೀಡಬೇಕೆಂದು ಕೋರಿದರು. ಕಳೆದ ಒಂದು ವಾರದಲ್ಲಿ ೧೧,೭೫೩ ಸ್ವಾö್ಯಬ್ ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ ೩,೩೯೭ ಮಂದಿಗೆ ಪಾಸಿಟೀವ್ ಬಂದಿದೆ. ಇದು ಆತಂಕದ ವಿಚಾರವಾಗಿದ್ದು, ಕೋವಿಡ್ ೨ನೇ ಅಲೆ ಅತ್ಯಂತ ಪ್ರಬಲವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ, ಯುವ ಸಮೂಹ ಕೋವಿಡ್-೧೯ರ ೨ನೇ ಅಲೆಗೆ ಸಿಲುಕಿ ಮೃತಪಡುತ್ತಿರುವುದು ಅತ್ಯಂತ ಬೇಸರ ತರಿಸಿದೆ ಎಂದು ನೊಂದು ನುಡಿದರು.
ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೌಲಭ್ಯವಿರುವ ೩೦೦ ಬೆಡ್ಗಳಿದ್ದು, ಅದನ್ನು ೭೦೦ಕ್ಕೆ ಏರಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ೧೩ ಕೆ.ಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಇದ್ದು, ೩ ದಿನ ಪೂರೈಕೆ ಮಾಡಬಹುದಾಗಿದೆ. ಅಗತ್ಯಾನುಸಾರ ರೀಫಿಲ್ ಕೂಡ ಮಾಡಲಾಗುತ್ತಿದೆ ಎಂದು ಅಪ್ಪಚ್ಚು ರಂಜನ್ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಲ್ಲೂ ಹೊರ ಭಾಗದಿಂದ ಬರುವವರ ಮೇಲೆ ನಿಗಾ ಇಡಲಾಗುತ್ತಿದ್ದು, ಕಡ್ಡಾಯವಾಗಿ ಹೋಂ ಕ್ವಾರಂಟೇನ್ಗೆ ಸೂಚಿಸಲಾಗಿದೆ. ಹೊರಗಿನಿಂದ ಬರುವವರಿಗೆ ಸೀಲ್ ಹಾಕುವಂತೆಯೂ ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ಹೇಳಿದ ಅಪ್ಪಚ್ಚು ರಂಜನ್ ಇದನ್ನು ಉಲ್ಲಂಘಿಸುವವರನ್ನು ಸರಕಾರಿ ಹೋಂ ಕ್ವಾರಂಟೇನ್ಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಜೀವ ಉಳಿದೆರೆ ನಾಳೆ ದುಡಿಯಬಹುದು ಎಂದು ಹೇಳಿದ ಅಪ್ಪಚ್ಚು ರಂಜನ್ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು.