ಮತದಾರರಲ್ಲಿ ಶಾಸಕ ರಹೀಂಖಾನ್ ಮನವಿ ‘ಮಾದರಿ ಬೀದರ್’ಗೆ ಕಾಂಗ್ರೆಸ್‍ಗೆ ಬೆಂಬಲಿಸಿ : Rahim khan

ಬೀದರ್: Rahim khan ಬೀದರ್ ನಗರವನ್ನು ಮಾದರಿ ನಗರವನ್ನಾಗಿಸಲು ನಗರಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಶಾಸಕ ರಹೀಂಖಾನ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸದ್ಯ ಚುನಾವಣೆ ನಡೆಯುತ್ತಿರುವ ಎಲ್ಲ ವಾರ್ಡ್‍ಗಳಲ್ಲೂ ಅಳೆದು ತೂಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಪಕ್ಷ ಅಭಿವೃದ್ಧಿ ವಿಷಯದ ಮೇಲೆ ಚುನಾವಣೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.
ಹಿಂದೆ ಅನೇಕ ವಾರ್ಡ್‍ಗಳಿಗೆ ಭೇಟಿ ನೀಡಿದಾಗ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನ ಗಮನ ಸೆಳೆದಿದ್ದರು. ನಗರಸಭೆ ಸದಸ್ಯರು ಸಮಸ್ಯೆಗೆ ಸ್ಪಂದಿಸದ ಬಗ್ಗೆಯೂ ಅಸಮಾಧಾನ ತೋಡಿಕೊಂಡಿದ್ದರು. ಈಗ ಸಮಯ ಬಂದಿದೆ. ಮತದಾರರು ತಮ್ಮ ಮತಾಧಿಕಾರವನ್ನು ಜನ ಸೇವಕರ ಆಯ್ಕೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ಶಾಂತಿ, ಸೌಹಾರ್ದ ಪ್ರಿಯರಾಗಿರುವ ಬೀದರ್ ಕ್ಷೇತ್ರದ ಮತದಾರರು ನನ್ನನ್ನು ಸತತ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನಗರಸಭೆ ಚುನಾವಣೆಯಲ್ಲಿ ಜಾತಿ, ಮತ, ಪಂಥ, ಹಣ ನೋಡದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಜನಸೇವೆಗೆ ಇನ್ನೂ ಹೆಚ್ಚಿನ ಶಕ್ತಿ ಕೊಡಬೇಕು ಎಂದು ಹೇಳಿದ್ದಾರೆ.
10 ವರ್ಷಗಳ ಅವಧಿಯಲ್ಲಿ ಬೀದರ್ ಕ್ಷೇತ್ರದಲ್ಲಿ ಸುಮಾರು ಒಂದು ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ರೂ. 140 ಕೋಟಿಯ ಬ್ರಿಮ್ಸ್ ಆಸ್ಪತ್ರೆ, ರೂ. 30 ಕೋಟಿಯ ತಾಯಿ-ಮಕ್ಕಳ ಆಸ್ಪತ್ರೆ, ನೌಬಾದ್, ಸಿದ್ರಾಮಯ್ಯ ಕಾಲೊನಿ ಸೇರಿ ನಗರದಲ್ಲಿ ಮೂರು ಆಸ್ಪತ್ರೆ, ಗ್ರಾಮೀಣ ಆಸ್ಪತ್ರೆ, ರೂ. 40 ಕೋಟಿಯ ದಿನದ 24 ಗಂಟೆ ಕುಡಿಯುವ ನೀರು ಯೋಜನೆ, ರೂ. 150 ಕೋಟಿ ಒಳಚರಂಡಿ ಕಾಮಗಾರಿ, ರೂ. 100 ಕೋಟಿಯ ರಿಂಗ್ ರಸ್ತೆ ಸೇರಿ ವಿವಿಧ ರಸ್ತೆಗಳು, ರೂ. 30 ಕೋಟಿ ಮೌಲ್ಯದ ಪಾಲಿಟೆಕ್ನಿಕ್ ಕಟ್ಟಡ, ರೂ. 100 ಕೋಟಿ ಮೊತ್ತದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಸೇರಿದಂತೆ ವಿವಿಧ ಕೆಲಸಗಳು ಆಗಿವೆ ಎಂದು ತಿಳಿಸಿದ್ದಾರೆ.
ನಗರದ ಪ್ರತಿ ವಾರ್ಡ್ ಹಾಗೂ ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿದ್ದೇನೆ. ಸುಮಾರು 15 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದ್ದಾರೆ.

Latest Indian news

Popular Stories