ಬಿಜೆಪಿ ಸರಕಾರ ಲೂಟಿ ಹೊಡೆದ ಹಣದಿಂದ 100 ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಬಹುದು – ಪ್ರಿಯಾಂಕ ಗಾಂಧಿ

ಬೆಳಗಾವಿ: ರಾಜ್ಯದಲ್ಲಿ ಭ್ರಷ್ಟಾಚಾರ ಸರ್ಕಾರ ಇದೆ. ರಾಜ್ಯ ಸರ್ಕಾರ 1.5 ಲಕ್ಷ ಕೋಟಿ ಹಣ ಲೂಟಿ ಮಾಡಿದೆ.


ಈ ಹಣದಿಂದ 100 ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಕಿಡಿಕಾರಿದರು. ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದ ಅವರು, ಲೂಟಿ ಮಾಡಿದ ಹಣದಿಂದ 30 ಲಕ್ಷ ಮನೆ ನಿರ್ಮಿಸಬಹುದಿತ್ತು.

2,250 ಕಿ.ಮೀ. ಆರು ಪಥದ ಎಕ್ಸ್‌ಪ್ರೆಸ್‌ ವೇ ನಿರ್ಮಿಸಬಹುದು. ನೂರಕ್ಕೂ ಹೆಚ್ಚು ಇಎಸ್ಐ ಆಸ್ಪತ್ರೆ ನಿರ್ಮಿಸಬಹುದಿತ್ತು. 30 ಸಾವಿರ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಬಹುದಿತ್ತು. ಬಿಜೆಪಿಯವರಿಗೆ ಕೊಟ್ಟ ಭರವಸೆ ಈಡೇರಿಸುವ ಮನಸ್ಥಿತಿ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದರು.

ಎಲ್ಲಾ ಆಯಾಮಗಳಲ್ಲಿಯೂ ಲೂಟಿ ಮಾಡಿ ಮೋಸ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಎರಡೂವರೆ ಲಕ್ಷ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ನೋಟ್‌ಬ್ಯಾನ್, ಜಿಎಸ್‌ಟಿಯಿಂದ ಸಣ್ಣ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿದೆ. ನೀವು ಪ್ರಾಮಾಣಿಕತೆಯಿಂದ ದುಡಿಯುವಾಗ ಸರ್ಕಾರವೂ ಪ್ರಾಮಾಣಿಕ ಆಗಿರಬೇಕು ಅಂತಾ ಬಯಸಲ್ವಾ ನೀವು ಎಂದು ಪ್ರಶ್ನಿಸಿದರು.

ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಮಾಡಿಲ್ಲ

ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ. ಮಾರ್ಚ್ 14ರಂದು ಮೋದಿ ಸರ್ಕಾರ ಲೋಕಸಭೆಯಲ್ಲಿ ಇದು ಸಾಧ್ಯವಿಲ್ಲ ಎಂದಿತು. ನಾಗಮೋಹನದಾಸ್ ಸಮಿತಿ ರಚಿಸಿದ್ದು ಕಾಂಗ್ರೆಸ್ ಸರ್ಕಾರ. ಆ ಸಮಿತಿ ಎಸ್​ಸಿ 15 ರಿಂದ 17 ಪರ್ಸೆಂಟ್, ಎಸ್‌ಟಿಗೆ 3 ರಿಂದ 7 ಪರ್ಸೆಂಟ್ ಹೆಚ್ಚಳ ಮಾಡಲು ತಿಳಿಸಿತ್ತು. ನಾಲ್ಕು ವರ್ಷಗಳ ಹಿಂದೆ ನಾಗಮೋಹನದಾಸ್ ಸಮಿತಿ ಇದನ್ನ ತಿಳಿಸಿತ್ತು. ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಇದ್ದರೂ ಏನು ಮಾಡಲಿಲ್ಲ. ಚುನಾವಣೆ ವೇಳೆ ನಿಮ್ಮ ಮುಂದೆ ದೊಡ್ಡ ದೊಡ್ಡ ಮಾತುಗಳನ್ನಾಡಿ ಭರವಸೆ ನೀಡುತ್ತಿದ್ದಾರೆ. ಇವರು ಯಾವುದೇ ಭರವಸೆ ಈಡೇರಿಸಲ್ಲ ಎಂದು ಕಿಡಿಕಾರಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಜಗತ್ತಿನಲ್ಲೇ ಹೆಸರು ವಾಸಿ

ಕರ್ನಾಟಕದಲ್ಲಿ ಎಲ್ಲವೂ ಇದೆ, ಅರಣ್ಯ ಸಂಪತ್ತು, ಖನಿಜ ಸಂಪತ್ತು ಇದೆ. ಇಲ್ಲಿಯ ಯುವಕರು ಶಿಕ್ಷಿತರಿದ್ದು ಅವರ ಭವಿಷ್ಯ ಉತ್ತಮವಾಗಿದೆ. ಇಡೀ ಜಗತ್ತಿನಲ್ಲಿ ಬೆಂಗಳೂರು ಸುಪ್ರಸಿದ್ಧವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಜಗತ್ತಿನಲ್ಲೇ ಹೆಸರು ವಾಸಿ. ನಾನು ವಿದೇಶಕ್ಕೆ ಹೋದಾಗ ಕರ್ನಾಟಕದ ಯುವಕರು ಐಟಿಯಲ್ಲಿ ಕೆಲಸ ಮಾಡುವವರು ಸಿಕ್ಕಾಗ ಗರ್ವವಾಗುತ್ತೆ. ಆದರೆ ಕರ್ನಾಟಕದಲ್ಲಿ ಇರುವ ಸರ್ಕಾರಕ್ಕೆ ಇದರ ಬಗ್ಗೆ ಗೊತ್ತಿಲ್ಲ ಎಂದರು.

Latest Indian news

Popular Stories