ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಕಾಂಗ್ರೇಸ್ ಟಾರ್ಗೆಟ್ | ನಿಮಗಾಗಿ 24 ಗಂಟೆ ಕೆಲಸ ಮಾಡುತ್ತೇನೆ ಎಂದ ಪಿ.ಎಮ್!

ಬೆಳಗಾವಿ: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ತುಷ್ಟೀಕರಣ ರಾಜಕೀಯದ ಪರಿಣಾಮ ಬೆಳಗಾವಿ (Belagavi) ವಂಟಮೂರಿಯಲ್ಲಿ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ಚಿಕ್ಕೋಡಿ ಜೈನ ಮುನಿ ಹತ್ಯೆ ಮತ್ತು ಹುಬ್ಬಳ್ಳಿ ನೇಹಾ ಹತ್ಯೆ ನಡೆಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಮೇಶ್ವರ ಬಾಂಬ್ ಸ್ಫೋಟ ಪ್ರಕರಣವಾಯಿತು. ಭಯೋತ್ಪಾದನೆಗೆ ಪ್ರೋತ್ಸಾಹಿಸುವ, ದೇಶವಿರೋಧಿ ಸಂಘಟನೆಯಾದ ಪಿಎಫ್‌ಐ ಸಂಘಟನೆಯನ್ನು ನಾವು ನಿರ್ಬಂಧ ಮಾಡಿದೆವು. ನಮ್ಮ ಸ್ವಾತಂತ್ರ‍್ಯ ಹೋರಾಟವನ್ನು ಕಾಂಗ್ರೆಸ್‌ನವರು ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಈಗಲೂ ತುಷ್ಟೀಕರಣದ ಪಾಪವನ್ನು ಮುಂದುವರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕಾಂಗ್ರೆಸ್‌ನವರಿಗೆ ಖಾರವಾಗಿ ಚಾಟಿಬೀಸಿದೆ ಎಂದು ಹರಿಹಾಯ್ದರು. 

ಮೈಸೂರು ರಾಜರನ್ನ ದೇಶ ಗರ್ವದಿಂದ ನೋಡುತ್ತಿದೆ. ಕಾಂಗ್ರೆಸ್ ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದೆ. ರಾಜ ಮಹಾರಾಜರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ. ಕಾಂಗ್ರೆಸ್ ಔರಂಗಜೇಬನನ್ನು ಗುಣಗಾನ ಮಾಡುವ ಪಾರ್ಟಿ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಕಾಂಗ್ರೆಸ್‌ಗೆ ನೆನಪಾಗಲ್ಲ. ನವಾಬ್, ಸುಲ್ತಾನ್ ವಿರುದ್ಧ ಒಂದೇ ಒಂದು ಅಕ್ಷರ ಕಾಂಗ್ರೆಸ್‌ನವರು ಮಾತನಾಡಲ್ಲ. ಕಾಂಗ್ರೆಸ್‌ನ ತುಷ್ಟೀಕರಣದ ನೀತಿ ಈಗ ಜನರಿಗೆ ಗೊತ್ತಾಗಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿ ಗೆದ್ದು ಬರುತ್ತದೆ ಅಲ್ಲಿ ಅಭಿವೃದ್ಧಿ ಮಾಯವಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳು ನಿಂತಿವೆ. ರಸ್ತೆ, ನೀರಾವರಿ ಕೆಲಸ ಸ್ಥಗಿತವಾಗಿದೆ. ಎಲ್ಲಿ ಕಾಂಗ್ರೆಸ್ ಬಂತು ಅಲ್ಲಿ ಬರ್ಬಾದಿ ಬಂತು ಎಂದು ಕಿಡಿಕಾರಿದರು. 

ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ರೈತರಿಗೆ ವಿಶ್ವಾಸಘಾತ ಮಾಡಿದೆ. ರೈತರ ಖಾತೆಗೆ 4,000 ಹಣ ಜಮೆ ಆಗುತ್ತಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದೆ. ಈ ನಿಮ್ಮ ಸೇವಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ. ಅದೇ ಕಾಂಗ್ರೆಸ್‌ನ ಅಣ್ಣ- ತಂಗಿ ಓಡಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್‌ನ ಎಕ್ಸ್‌ರೇಯಿಂದ ತಾಯಂದಿರ ಮಂಗಳಸೂತ್ರ ಉಳಿಯಲ್ಲ. ಮೋದಿ ಇರೋವರೆಗೂ ಕಾಂಗ್ರೆಸ್‌ನ ಹುನ್ನಾರ ಫಲಿಸುವುದಿಲ್ಲ. ನಿಮ್ಮ ಕನಸೇ ಮೋದಿ ಸಂಕಲ್ಪ ಆಗಿದೆ. ನಿಮ್ಮ ಕನಸು ಸಾಕಾರ ಮಾಡಲು ನಾನು ನನ್ನ ಕ್ಷಣಗಳನ್ನು ನಿಮಗಾಗಿ ಮೀಸಲಿಟ್ಟಿದ್ದೇನೆ. ದಿನದ 24 ಗಂಟೆಯೂ ನಿಮಗಾಗಿ ಕೆಲಸ ಮಾಡುತ್ತೇನೆ. 2027ರವರೆಗೂ ನಾನು ಇರುವೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್, ಚಿಕ್ಕೋಡಿಯಲ್ಲಿ ಅಣ್ಣಾಸಾಹೆಬ್ ಜೊಲ್ಲೆಯನ್ನು ಗೆಲ್ಲಿಸಬೇಕು. ಕಮಲ ಚಿನ್ಹೆಗೆ ಮತ ಹಾಕಿದರೆ ನೇರವಾಗಿ ಮೋದಿಗೆ ಮತ ಬರಲಿದೆ. ಮೋದಿ ಗೆಲ್ಲಿಸಲು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದರು. 

ಭಾರತದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಕಳೆದ 10 ವರ್ಷದಲ್ಲಿ ಬಡತನ ನಿರ್ಮೂಲನೆ ಆಗಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂದು ದೇಶ ಹೇಳುತ್ತಿದೆ. ಕಾಂಗ್ರೆಸ್‌ನವರು ಸುಳ್ಳು ಹಬ್ಬಿಸಿದರು. ಕೊರೊನಾ ಸಂದರ್ಭದಲ್ಲಿ ವ್ಯಾಕ್ಸಿನ್ ಬಗ್ಗೆ ರಾಜಕೀಯ ಮಾಡಿದರು. ವಾಕ್ಸಿನ್ ಅನ್ನು ಬಿಜೆಪಿ ವ್ಯಾಕ್ಸಿನ್ ಎಂದರು. ಇವಿಎಂ ವಿಚಾರದಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡಿದರು. ಕಳೆದ 10 ವರ್ಷದಲ್ಲಿ ದೇಶ ಪ್ರಗತಿ ಸಾಧಿಸುತ್ತಿದೆ. ಕಾಂಗ್ರೆಸ್‌ನವರು ಮಾನಸಿಕವಾಗಿ ಬ್ರಿಟಿಷರ ಮನಸ್ಥಿತಿಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದನೆಗೆ ಬ್ರೇಕ್ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತ ಇರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು.

Latest Indian news

Popular Stories